ಬೆಂಗಳೂರು:- ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳ ಮುಂದೆ ಇಂದು ಸಚಿವ ಜಮೀರ್ ಅಹಮ್ಮದ್ ಅವರು ವಿಚಾರಣೆ ಎದುರಿಸಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಸಚಿವ ಜಮೀರ್ ಅಹಮದ್ ಗೆ ಇಂದು ಲೋಕಾಯುಕ್ತ ನೋಟಿಸ್ ಜಾರಿ ಮಾಡಿತ್ತು. ಅದರಂತೆ ಇಂದು ಸಚಿವರು ವಿಚಾರಣೆ ಎದುರಿಸಿದ್ದಾರೆ.
ಬಳಿಕ ಮಾತನಾಡಿದ ಜಮೀರ್, ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇನೆ. ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಕರೆಯುವುದಾಗಿ ತಿಳಿಸಿದ್ದಾರೆ. ವಿಚಾರಣೆಗೆ ಕರೆದರೆ ಮತ್ತೆ ಹಾಜರಾಗುತ್ತೇನೆ ಎಂದು ಅವರು ಹೇಳಿದ್ದಾರೆ.
ಇನ್ನೂ ಐಎಂಎ ಕೇಸ್ನಲ್ಲಿ ಈ ಹಿಂದೆ ಜಮೀರ್ ಮನೆ ಮೇಲೆ ಇಡಿ ದಾಳಿ ನಡೆಸಿದ್ದಾಗ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿತ್ತು. ಈ ಪ್ರಕರಣವನ್ನು ಇಡಿಯವರು ಎಸಿಬಿಗೆ ವರ್ಗಾಯಿಸಿದ್ದರು. 2021ರಲ್ಲಿ ಜಮೀರ್ ಮೇಲೆ ಎಫ್ಐಆರ್ ಆಗಿತ್ತು. ಈಗ ಎಸಿಬಿ ರದ್ದಾಗಿ, ಲೋಕಾಯುಕ್ತಕ್ಕೆ ಕೇಸ್ ವರ್ಗಾವಣೆಯಾಗಿದೆ. 3 ಬಾರಿ ಸಮನ್ಸ್ ಕೊಟ್ಟಿದ್ದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಡಿಸೆಂಬರ್ 3ರಂದು ಖುದ್ದು ವಿಚಾರಣೆಗೆ ಬರುವಂತೆ ಲೋಕಾಯುಕ್ತ ಡಿವೈಎಸ್ಪಿ ಸಚಿವ ಜಮೀರ್ ಅವರಿಗೆ ನೋಟಿಸ್ ನೀಡಿದ್ದರು. ಅದರಂತೆ ಇಂದು ಸಚಿವರು ವಿಚಾರಣೆ ಎದುರಿಸಿದ್ದಾರೆ.