ರಾಯಚೂರು: ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾಲಿ ಜಾಗ ಮತ್ತು ಜಮೀನುಗಳನ್ನು ಕಬಳಿಸುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ₹20 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಮೊಹಮದ್ ಜಾವೀದ್, ಅಕ್ಷಯ ಕುಮಾರ್, ಉಪೇಂದ್ರಕುಮಾರ್, ನೀಲಕಂಠ ಮತ್ತು ಆಂಜನೇಯ ಎಂದು ಗುರುತಿಸಲಾಗಿದೆ. ನಗರದ ಸದರ್ ಬಜಾರ್ ಹಾಗೂ ಸಿರವಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು 6 ಪ್ರಕರಣಗಳಲ್ಲಿ ಬೇಕಿದ್ದ ಆರೋಪಿಗಳನ್ನ ಬಂಧಿಸಲಾಗಿದೆ.ಬಂಧಿತರು ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೃಷ್ಟಿಸಿ, ನಕಲಿ ಮಾಲೀಕರಿಂದ ಆಸ್ತಿಗಳನ್ನ ಮಾರಾಟ ಮಾಡಿಸುತ್ತಿದ್ದರು.
ಬಂಧಿತರಿಂದ 20 ಲಕ್ಷ ರೂ. ಹಾಗೂ ಸೈಟ್ ಮಾರಾಟದ ಹಣದಲ್ಲಿ ಖರೀದಿಸಿದ್ದ ಕಿಯಾ ಕಾರನ್ನ ಜಪ್ತಿ ಮಾಡಲಾಗಿದೆ. ಸದ್ಯ ಬಂಧಿತ ಆರೋಪಿಗಳ ಪೈಕಿ ಓರ್ವ ಆರೋಪಿ ಜಾಮೀನು ಪಡೆದಿದ್ದು, ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇನ್ನೂ ನಕಲಿ ದಾಖಲೆ ಸೃಷ್ಟಿಗೆ ಸಹಕರಿಸಿದ ಅಧಿಕಾರಿಗಳ ವಿಚಾರಣೆ ಮುಂದುವರೆದಿದೆ.