ವಿಜಯಸಾಕ್ಷಿ ಸುದ್ದಿ, ಗದಗ: ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಅನುಭವಿಸುವ ಸಮಸ್ಯೆಗಳನ್ನು ಕತೆಗಳ ಮೂಲಕ ಸಮಾಜದೆದುರು ತೆರೆದಿಡುವ ಪ್ರಯತ್ನವನ್ನು `ಎದೆಯ ಹಣತೆ’ ಕೃತಿಯಲ್ಲಿ ಬಾನು ಮುಷ್ತಾಕ ಅವರು ಮಾಡಿದ್ದಾರೆ. ಸಮಾನತೆಯ ತಳಹದಿಯ ಮೇಲೆ ಮಹಿಳೆಯ ಬದುಕು ರೂಪುಗೊಳ್ಳಬೇಕು. ಹೆಣ್ಣಿನ ಆಶೋತ್ತರಗಳನ್ನು ಅರ್ಥೈಸಿಕೊಂಡು ಸ್ಪಂದಿಸುವ ಕುಟುಂಬ ವ್ಯವಸ್ಥೆ ರೂಪಗೊಳ್ಳುವ ಅವಶ್ಯಕತೆಯನ್ನು ಇಲ್ಲಿಯ ಕತೆಗಳು ವ್ಯಕ್ತಪಡಿಸುತ್ತವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧಕ ಮಂಜುನಾಥ ಕರಲಿಂಗಣ್ಣವರ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗದುಗಿನ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನದಲ್ಲಿ ಜರುಗಿದ ಬೂಕರ್ ಪ್ರಶಸ್ತಿ ಪುರಸ್ಕೃತ `ಎದೆಯ ಹಣತೆ’ ಕೃತಿಯ ಕುರಿತು ನಡೆದ ಸಂವಾದದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಮಾಜಿಕ ಸಮಾನತೆಗೆ ಶಿಕ್ಷಣವೊಂದೇ ಪ್ರಬಲ ಅಸ್ತ್ರವಾಗಿದೆ. ಶಿಕ್ಷಣದ ಕೊರತೆಯಿಂದ ಆರ್ಥಿಕ ಅಸಮಾನತೆ ತಲೆದೋರಿ ಅಸಮಾನ ವ್ಯವಸ್ಥೆ ಸಮಾಜದಲ್ಲಿ ರೂಪಗೊಳ್ಳುತ್ತಿದೆ. ಬಡವರು, ಕೆಳವರ್ಗದ ಜನರು ಅಮಾನವೀಯ ಕಟ್ಟಳೆಗಳಿಗೆ ಬಲಿಯಾಗುತ್ತಿದ್ದಾರೆ. ಮಹಿಳೆ ತನ್ನ ಇಡೀ ಜೀವನವನ್ನು ಕುಟುಂಬದ ಒಳಿತಿಗಾಗಿ ಮೀಸಲಿಟ್ಟರೂ ಎರಡನೇ ದರ್ಜೆಯ ಸ್ಥಾನಮಾನವನ್ನು ಹೊಂದಿದ್ದಾಳೆ. ಕತೆಗಳ ಮೂಲಕ ಮಹಿಳೆಯ ಸಮಸ್ಯೆಗಳನ್ನು ಮುಂದಿಟ್ಟು ಪರಿಹಾರವನ್ನು ಸೂಚಿಸುವ ಮನಸ್ಥಿತಿಯನ್ನು ನಿರ್ಮಿಸುವ ಪಯತ್ನವನ್ನು ಬಾನು ಮುಷ್ತಾಕ ಅವರು ಮಾಡುತ್ತಾರೆ ಎಂದು ತಿಳಿಸಿದರು.
ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ರಕ್ಷಿತಾ ಗಿಡ್ನಂದಿ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು. ಕಾರ್ಯಕ್ರಮದಲ್ಲಿ ದತ್ತಪ್ರಸನ್ನ ಪಾಟೀಲ, ರತ್ನಕ್ಕ ಪಾಟೀಲ, ಶಾರದಾ ಬಾಣದ, ಸುಶಾಂತೆ ನೀಲಗುಂದ, ಜಯಶ್ರೀ ಅಂಗಡಿ, ಅನಸೂಯಾ ಮಿಟ್ಟಿ, ಶೇಖಣ್ಣ ಕಳಸಾಪೂರಶೆಟ್ರ, ಸೈಯದಉಸ್ಮಾನ ಕೊಪ್ಪಳ, ಬಸವರಾಜ ತೋಟಗೇರ, ಜಯದೇವ ಭಟ್, ಡಿ.ಜಿ. ಕುಲಕರ್ಣಿ, ಬಸವರಾಜ ವಾರಿ, ಹನುಮರಡ, ಬಸವರಾಜ ಗಣಪ್ಪನವರ, ರಾಜಶೇಖರ ದಾನರಡ್ಡಿ, ನೀಲಮ್ಮ ಅಂಗಡಿ, ಶೈಲಜಾ ಗಿಡ್ನಂದಿ, ಬಿ.ಬಿ. ಹೊಳಗುಂದಿ, ಎಂ.ಎಸ್. ಹಾಲಶೆಟ್ಟಿ, ಅಮೃತಾ ಚನ್ನಪ್ಪಗೌಡರ, ಐ.ಕೆ. ಕಮ್ಮಾರ, ರತ್ನಾ ಪುರಂತರ, ವಿದ್ಯಾಧರ ದೊಡಮನಿ, ಗುರಪ್ಪ ಗಿರಿತಿಮ್ಮಣ್ಣವರ, ಬಿ.ಜಿ. ಗಿರಿತಿಮ್ಮಣ್ಣವರ, ಶಾಂತಲಾ ಹಂಚಿನಾಳ, ಎಂ.ಎಫ್. ದೋಣಿ, ರಾಜಶೇಖರ ಕರಡಿ, ಕೆ.ಜಿ. ವ್ಯಾಪಾರಿ, ಶಿವಾನಂದ ಭಜಂತ್ರಿ, ಜಿ.ಎಸ್. ನಂದಿಕೋಲಮಠ, ಅಶೋಕ ಸತ್ಯರಡ್ಡಿ, ಸತೀಶ ಚನ್ನಪ್ಪಗೌಡರ, ಶರಣಯ್ಯ ಹಿರಮಠ, ಎಸ್.ಬಿ. ಅಕ್ಕಿ, ಷಡಕ್ಷರಿ ಮೆಣಸಿನಕಾಯಿ ಮುಂತಾದವರು ಭಾಗವಹಿಸಿದ್ದರು.
ಇದು ಮಹಿಳೆಯರ ಜೀವನ, ಸಾಮಾಜಿಕ ಸಮಸ್ಯೆಗಳು ಮತ್ತು ಸಹಿಷ್ಣುತೆಯ ಕುರಿತು ಪ್ರತಿಪಾದಿಸುತ್ತದೆ. ಇಲ್ಲಿರುವ 12 ಕತೆಗಳು ಭಾವನಾತ್ಮಕವಾಗಿ ಆಳವಾಗಿದ್ದು, ಓದುಗನಲ್ಲಿ ಸಂವೇದನೆಯನ್ನು ಸೃಷ್ಟಿಸುತ್ತವೆ. ಕುಟುಂಬದ ಪಾಲನೆಯ ಹಿನ್ನೆಲೆಯಲ್ಲಿ ಹೆಣ್ಣು ತೋರುವ ಬದ್ಧತೆ, ಸಹನೆ, ತಾಳ್ಮೆಯಂತಹ ಗುಣಗಳನ್ನು ಎತ್ತಿ ತೋರುತ್ತದೆ. ತನ್ಮೂಲಕ ಭೇದರಹಿತ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಪಾದಿಸುತ್ತವೆ ಎಂದು ಮಂಜುನಾಥ ಕರಲಿಂಗಣ್ಣವರ ತಿಳಿಸಿದರು.