ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ನಮ್ಮ ಮುಂದಿನ ಪೀಳಿಗೆಯ ಆರೋಗ್ಯ ರಕ್ಷಣೆಗಾಗಿ ಕೃಷಿಕರು ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಮಣ್ಣನ್ನು ರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ಮಾಧವ ಹೆಗಡೆ ಅಭಿಪ್ರಾಯಪಟ್ಟರು.
ಇಲ್ಲಿಯ ಪ್ರವಾಸಿ ಮಂದರಿದ ಸಭಾ ಭವನದಲ್ಲಿ ಭಾರತೀಯ ಕಿಸಾನ ಸಂಘದ ಗದಗ ತಾಲೂಕು ಘಟಕವು ಹಮ್ಮಿಕೊಂಡಿದ್ದ ಸಾವಯವ ಕೃಷಿ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳೆಗೆ ರಾಸಾಯನಿಕ ಗೊಬ್ಬಗಳನ್ನು ಹಾಕುವುದರಿಂದ ವಿಷದ ಆಹಾರವನ್ನು ಕೊಡುತ್ತಿದ್ದೇವೆ. ಆದ್ದರಿಂದ ಗೋ ಆಧಾರಿತ ಮತ್ತು ಎರೆ ಹುಳು ಆಧಾರಿತ ಸಾವಯವ ಕೃಷಿಯನ್ನು ಪ್ರತಿಯೊಬ್ಬ ರೈತರು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ. ದತ್ತುಪಾಧ್ಯ ತಿಂಗಡೆಯವರು ಸ್ಥಾಪನೆ ಮಾಡಿ ಬೆಳೆಸಿದ ಭಾರತೀಯ ಕಿಸಾನ್ ಸಂಘವು ಕಳೆದ 75 ವರ್ಷಗಳಿಂದ ಕೃಷಿಕರ ಅಭಿವೃದ್ಧಿಗಾಗಿ ಹೊರಾಡುತ್ತಾ ಬಂದಿದೆ ಎಂದರು.
ರಾಜ್ಯ ಕೃಷಿ ಸಾಧಕ ಪ್ರಶಸ್ತಿ ವಿಜೇತೆ ಡಾವಣಗೇರಿಯ ಕೆ.ಜಿ. ವಸಂತಮ್ಮ ಸನ್ಮಾನ ಸ್ವೀಕರಿಸಿ ಮಾತನಾಡಿ, ಮನುಷ್ಯ ಸತ್ತರೆ ಮಣ್ಣಿಗೆ, ಮಣ್ಣೇ ಸತ್ತರೆ ಎಲ್ಲಿಗೆ? ಭೂ ತಾಯಿಗೆ ವಿಷವನ್ನು ಉಣಿಸದೇ ಗೋ ಆಧಾರಿತ ಕೃಷಿಯನ್ನು ಮಾಡಿ ಎಂದು ಕರೆ ನೀಡಿದರು.
ಸಾವಯವ ಕೃಷಿ ಪ್ರಶಸ್ತಿ ಪುರಸ್ಕೃತ ಬಿಂಕದಕಟ್ಟಿಯ ದೇವರೆಡ್ಡಿ ಅಗಸನಕೊಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಸ್ವಾವಲಂಬಿ ರೈತ, ಸಂಪನ್ನ ಗ್ರಾಮ, ಸಮರ್ಥ ಭಾರತ ಎಂಬ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಸ್ಥಾಪನೆ ಮಾಡಿದ ದತ್ತುಪಾಧ್ಯ ಕಿಂಗಡೆ ಗ್ರಾಮದಲ್ಲಿಯ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದರು.
ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಡಾವಣಗೇರಿಯ ಕೆ.ಜಿ ವಸಂತಮ್ಮ, ದೇವರೆಡ್ಡಿ ಅಗಸನಕೊಪ್ಪ, ಸಂಗನಾಳ ಗ್ರಾಮದ ರುದ್ರಗೌಡ ಲಿಂಗನಗೌಡರ, ವೆಂಕಟೇಶ ದೊಂಗಡೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ವಿಧಿ ವಿಧಾನಗಳೊಂದಿಗೆ ಗೋಪೂಜೆ ಹಾಗೂ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಎಂ.ಜಿ. ನೀಲಪ್ಪಗೌಡರ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ಜಲರೆಡ್ಡಿ, ಟಾಕಪ್ಪ ಸಾತಪುತೆ, ಚಂದ್ರು ದಂಡಿನ, ಬಸವರಾಜ ಅಸುಂಡಿ, ಸೋಮಶೇಖರ ಹಿರೇಮಠ, ರಾಮನಗೌಡ ಪಾಟೀಲ, ವೆಂಕಟೇಶ ಸೂರಣಗಿ, ಈರಣ್ಣ ಚಿನ್ನೂರ, ಕುಬೇರಪ್ಪ ಚನ್ನಬಸನಗೌಡ ಪಾಟೀಲ, ಭೀಮಪ್ಪ ಅವಾರಿ, ಕುಮಾರ ಹಲವಾಗಲಿ, ಭಾರತಿ ಹಂಚಿನಾಳ, ಭರಮಪ್ಪ ನಾಗನೂರು, ದೇವರಡ್ಡಿ ಬಂಡಿ, ರಮೇಶ ರಾಮೇನಹಳ್ಳಿ, ಮಂಜುನಾಥ ಹುಬ್ಬಳ್ಳಿ, ರಾಜಸೇಖರ ಹಿರೇಮಠ, ಬಸಣ್ಣ ಮೂಲಿಮನಿ, ಬಸಣ್ಣ ದೊಡಗಣ್ಣವರ, ಶಕುಂತಲಾ ಮರೇಗೌಡರ, ರೈತ ಆಧಾರಿತ ಎಫ್ಪಿಒ ಅಧ್ಯಕ್ಷ ಫಕ್ಕೀರಯ್ಯ ಹಿರೇಮಠ, ಶ್ರೀಧರ ಪಾಟೀಲ, ನೆಟ್ಸರ್ಫ್ನ ವ್ಯವಸ್ಥಾಪಕ ಅತಿಷ್ ಪಾಟೀಲ, ಹನುಮಗೌಡ ಬ್ಯಾಲಾಳ ಉಪಸ್ಥಿತರಿದ್ದರು.
ಈ ಸಂಘವು ಪಕ್ಷ ಭೇದ ಮರೆತು ಗೋಮಾತೆಯನ್ನು ರಕ್ಷಣೆ ಮಾಡುವುದರಿಂದ ದೇಶ ಸೇವೆಯಲ್ಲಿ ತೊಡಗಿಕೊಂಡಿದೆ. 1961ರಲ್ಲಿ ದೇಶಕ್ಕೆ ಆಹಾರ ಕೊರತೆ ಎದುರಾದಾಗ ಈ ದೇಶದ ಪ್ರಧಾನಿಯಾಗಿದ್ದ ಲಾಲಬಹದ್ದೂರ ಶಾಸ್ತಿçಗಳು ವಾರದಲ್ಲಿ ಒಂದು ದಿನ ಉಪವಾಸ ಮಾಡಲು ಕರೆ ನೀಡಿದ್ದರು. ರೈತರು ಸ್ಪಂದಿಸಿ ಇಂದಿಗೂ ಸಹ ಉಪವಾಸ ಮಾಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಈ ಹಿಂದೆ 40 ರಾಷ್ಟ್ರಗಳು ಸೇರಿ ನಮ್ಮ ದೇಶವನ್ನು ಹಾಳು ಮಾಡಲು ಉಪಾಯ ಮಾಡಿದ್ದರು. ಆದರೆ ಇಂದು ಅದೇ 40 ರಾಷ್ಟ್ರಗಳು ಕುಂಭ ಮೇಳದಲ್ಲಿ ಪಾಲ್ಗೊಂಡು ಶಸ್ತ್ರ ಮತ್ತು ಶಾಸ್ತ್ರ ವಿದ್ಯೆಯನ್ನು ಕಲಿತ ನಾಗಾ ಸಾಧುಗಳ ಆಶೀರ್ವಾದವನ್ನು ಪಡೆಯಲು ಆಗಮಿಸುತ್ತಿರುವುದು ನಮ್ಮ ದೇಶದ ಶಕ್ತಿಯಾಗಿದೆ ಎಂದು ಮಾಧವ ಹೆಗಡೆ ತಿಳಿಸಿದರು.