ವಿಜಯಸಾಕ್ಷಿ ಸುದ್ದಿ, ಗಂಗಾವತಿ : ಇಲ್ಲಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯ ವಡ್ಡರಹಟ್ಟಿ ಗ್ರಾಮದ ಸರ್ವೇ ನಂ 48/02ರ 29 ಗುಂಟೆ ಜಮೀನಿಗೆ ಹೋಗುವ ರಸ್ತೆ ಬಂದ್ ಮಾಡಿ ಜಮೀನಿನಲ್ಲಿ ಹಾಕಿರುವ ಶೆಡ್ ಕಿತ್ತು ಹಾಕುವ ಮೂಲಕ ಜಿಲ್ಲಾ ಕೃಷಿ ತರಬೇತಿ ಅಧಿಕಾರಿ ದೌರ್ಜನ್ಯ ಎಸಗಿದ್ದು, ಕೂಡಲೇ ಕ್ರಮ ಕೈಗೊಳ್ಳುವ ಮೂಲಕ ನಮ್ಮ ಜಮೀನಿನ ರಸ್ತೆ ಬಿಟ್ಟುಕೊಡಬೇಕು ಎಂದು ಅಗ್ರಹಿಸಿ ನಗರದ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ಸಿಕ್ಕಲಗಾರ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ಕುರಿತು ಪ್ರಮುಖರಾದ ಜಾಕೀರ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಸುಮಾರು 28 ಎಕರೆ ಖರೀದಿ ಮಾಡಲಾಗಿತ್ತು. ಮೈಸೂರು ರಾಜ್ಯವಿದ್ದ ಸಂದರ್ಭದಲ್ಲಿ 17 ಎಕರೆ ಪಿಡಬ್ಲ್ಯೂಡಿ, ನೀರಾವರಿ ಹಾಗು ಕೃಷಿ ಇಲಾಖೆಗಾಗಿ ಭೂಸ್ವಾಧಿನ ಮಾಡಿಕೊಳ್ಳಲಾಗಿತ್ತು. ಇದೇ ಜಮೀನಿನ 7 ಎಕರೆಯಲ್ಲಿ ಕೆಲ ವಲಸಿಗರು ಗುಡಿಸಲು ಹಾಕಿಕೊಂಡಿದ್ದು ನ್ಯಾಯಾಲಯದಲ್ಲಿ ಅವರ ವಿರುದ್ಧ ತೀರ್ಪು ಬಂದಿದೆ. ಆದರೆ ತಹಸೀಲ್ದಾರರು ತೆರವುಗೊಳಿಸುತ್ತಿಲ್ಲ. ನಮ್ಮ ಉಳಿದ ಜಮೀನನ್ನು ಕೃಷಿ ಇಲಾಖೆ ಕಬಳಿಸಿತ್ತು. ಪರಿಶೀಲಿಸಿ 2017ರಲ್ಲಿ ನಮ್ಮ ಸುರ್ಪರ್ದಿಗೆ ನೀಡಿದ್ದರೂ ಕೃಷಿ ತರಬೇತಿ ಇಲಾಖೆಯ ಅಧಿಕಾರಿ ದೌರ್ಜನ್ಯದ ಮೂಲಕ ನಮ್ಮದೇ ಜಮೀನಿನಲ್ಲಿರುವ ರಸ್ತೆ ಬಂದ್ ಮಾಡಿ ಉದ್ಧಟತನ ಮೆರೆಯುತ್ತಿದ್ದಾರೆ. ಮೇಲಾಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರಾದ ಮೈನುದ್ದೀನ್, ಷಹನಾಜ್, ಅಸ್ಲಾಂ, ಜುಬೇದಾ ಹಾಗು ಯಾಫ್ರೀನ್ ಇತರರಿದ್ದರು.