ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿನ ಪ್ರಧಾನ ಮಂತ್ರಿ ಜನಔಷಧಿ ಕೇಂದ್ರಗಳನ್ನು ರಾಜ್ಯ ಸರ್ಕಾರ ರದ್ದು ಮಾಡಿರುವದನ್ನು ವಿರೋಧಿಸಿ ಲಕ್ಕುಂಡಿ ಬಿ.ಜೆ.ಪಿ ಮಂಡಳದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಡವರು, ದೀನ ದಲಿತರಿಗೆ ಸಹಾಯವಾಗಿದ್ದ ಜನಔಷಧ ಕೇಂದ್ರಗಳನ್ನು ಬಂದ್ ಮಾಡಿದ ರಾಜ್ಯ ಸರಕಾರದ ಜನ ವಿರೋಧಿ ನಡವಳಿಕೆಯ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ ಯುವ ಮುಖಂಡ ದತ್ತಾತ್ರೇಯ ಜೋಶಿ ಮಾತನಾಡಿ, ನರೇದ್ರ ಮೋದಿಯವರ ಕೇಂದ್ರ ಸರಕಾರ ಬಡವರ ಅನುಕೂಲಕ್ಕಾಗಿ ಜನಔಷಧಿ ಕೇಂದ್ರಗಳನ್ನು ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ತೆರೆದು ಉತ್ತಮ ಯೋಜನೆಯನ್ನು ನೀಡಿತ್ತು. ಇದನ್ನು ಅರಿತ ಕಾಂಗ್ರೆಸ್ ಸರಕಾರ ದುಷ್ಟ ರಾಜಕಾರಣದಿಂದ ಕೇಂದ್ರದ ಜನಪ್ರಿಯತೆ ಸಹಿಸಲಾರದೇ ಜನಔಷಧಿ ಕೇಂದ್ರಗಳನ್ನು ರದ್ದು ಮಾಡಿ ಕ್ಷುಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಕುಂಡಿ ಬಿ.ಜೆ.ಪಿ ಮಂಡಲದ ಅಧ್ಯಕ್ಷ ಮಹೇಶ ಮುಸ್ಕಿನಭಾವಿ ಮಾತನಾಡಿ, ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ನೀಡುತ್ತಾ ಬಡ ಜನರ ಮೇಲೆ ದುಪ್ಪಟ್ಟು ತೆರಿಗೆಯನ್ನು ಹೇರಿ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಹಲವಾರು ಭಾಗ್ಯಗಳನ್ನು ಘೋಷಣೆ ಮಾಡಿದೆ. ಆದರೆ ಇದು ವೈಫಲ್ಯಗಳ ಭಾಗ್ಯದ ಸರಕಾರವಾಗಿದೆ ಎಂದು ಆರೋಪಿಸಿದರು.
ಬಿ.ಜೆ.ಪಿ ಲಕ್ಕುಂಡಿ ಮಂಡಲದ ಎಸ್.ಸಿ ಮೋರ್ಚಾ ಅಧ್ಯಕ್ಷ ಬಸವರಾಜ ಮುಳ್ಳಾಳ, ಯುವ ಧುರೀಣ ಪ್ರಕಾಶ ಅರಹುಣಶಿ ಮಾತನಾಡಿದರು.
ಗ್ರಾ.ಪಂ ಸದಸ್ಯರಾದ ರೇವಣಸಿದ್ದಪ್ಪ ಮುಳಗುಂದ, ವಿರೂಪಾಕ್ಷಪ್ಪ ಬೆಟಗೇರಿ, ಅಶೋಕ ಬೂದಿಹಾಳ, ಮರಿಯಪ್ಪ ವಡ್ಡರ, ಅಪ್ಪಣ್ಣ ಕಮತರ, ಬಸವರಾಜ ಕವಲೂರು, ಪ್ರವೀಣ ಕಲಾಲ, ಚನ್ನಪ್ಪ ಹುಬ್ಬಳ್ಳಿ, ವೀರಯ್ಯ ನಡುವಿನಮಠ, ಕಳಕೇಶ ಟೆಂಗಿನಕಾಯಿ, ಶೇಖಪ್ಪ ಮುಸ್ಕಿನಭಾವಿ, ವೀರಭದ್ರಪ್ಪ ಕುಂಬಾರ, ಈರಪ್ಪ ಕುಂಬಾರ, ಪ್ರವೀಣ ಬಂಡಿ, ಚಂದ್ರು ಬಣವಿ ಮುಂತಾದವರು ಹಾಜರಿದ್ದರು.