ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ರಾಜ್ಯ ಸರಕಾರ ಪೆಟ್ರೋಲ್-ಡಿಸೆಲ್, ಹಾಲಿನ ದರ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಜನ ವಿರೋಧಿ ನೀತಿಯನ್ನು ಖಂಡಿಸಿ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ರಾಜ್ಯ ಸರಕಾರ ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹಣವನ್ನು ಹೆಚ್ಚಿಸಿದ್ದರಿಂದ ಜನಸಾಮಾನ್ಯರು ಹಾಗೂ ಮಧ್ಯಮ ವರ್ಗದ ಜನರಿಗೆ ಜೀವನ ನಡೆಸಲು ತೊಂದರೆಯಾಗಿದೆ. ತೈಲಬೆಲೆ ಹೆಚ್ಚಿಸಿರುವದನ್ನು ತಕ್ಷಣ ಹಿಂಪಡೆಯಬೇಕು. ಪಂಚ ಗ್ಯಾರಂಟಿಗಳ ನೆಪದಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ ಜನರ ಹಣವನ್ನು ಕಾಂಗ್ರೆಸ್ ಸರಕಾರ ಲೂಟಿ ಮಾಡುತ್ತಿದೆ.
ತೆಲಂಗಾಣ ರಾಜ್ಯದ ಚುನಾವಣೆಗೆ ರಾಜ್ಯದ ವಾಲ್ಮೀಕಿ ನಿಗಮ ಮಂಡಳಿಯಿಂದ 187 ಕೋಟಿ ಹಣವನ್ನು ಲಪಟಾಯಿಸಿದೆ, ಎಸ್ಸಿ/ಎಸ್ಟಿ ಸಮುದಾಯದ ಅಭಿವೃದ್ದಿಗೆ ಮೀಸಲಿರಿಸಿದ 11 ಸಾವಿರ ಕೋಟಿ ಗ್ಯಾರಂಟಿ ಯೋಜನೆ ನೆಪದಲ್ಲಿ ಲೂಟಿ ಮಾಡಿದೆ. ಸರಕಾರದ ಖಜಾನೆ ಖಾಲಿಯಾಗಿ ಹಣಕ್ಕಾಗಿ ಸರ್ಕಾರಿ ಆಸ್ತಿ ಮಾರಾಟಕ್ಕೆ ಕಾಂಗ್ರೆಸ್ ಮುಂದಾಗಿದೆ.
ಈ ಸಂದರ್ಭದಲ್ಲಿ ಸುನೀಲ್ ಮಹಾಂತಶೆಟ್ಟರ, ಬಸವರಾಜ ಪಲ್ಲೇದ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ನಿಂಗಪ್ಪ ಬನ್ನಿ, ಅಕ್ಬರಸಾಬ ಯಾದಗಿರಿ, ಅಶೋಕ ವರವಿ, ನಂದಾ ಪಲ್ಲೇದ, ಬಸವರಾಜ ವಡವಿ, ಯಲ್ಲಪ್ಪ ಇಂಗಳಗಿ, ರಾಜು ಕಪ್ಪತ್ತನವರ, ಲಕ್ಷ್ಮಣ ಬಾರಬಾರ, ಅನಿಲ ಮುಳಗುಂದ, ಗೂಳಪ್ಪ ಕರಿಗಾರ, ವೀರಣ್ಣ ಅಂಗಡಿ, ಮುತ್ತಣ್ಣ ಕಲಾದಗಿ, ಮಹೇಶ ಕಲ್ಲಪ್ಪನವರ, ಉಮೇಶ ಅಕ್ಕಿ ಮುಂತಾದವರು ಉಪಸ್ಥಿತರಿದ್ದರು.
ಶಾಸಕರ ಕ್ಷೇತ್ರ ಅಭಿವೃದ್ಧಿಗೆ ಅನುದಾನ ನೀಡದೆ ಸಾರ್ವಜನಿಕರ ಮೂಲಸೌಕರ್ಯ ನೀಡುವಲ್ಲಿ ಸಂಪೂರ್ಣವಾಗಿ ರಾಜ್ಯ ಸರಕಾರ ವಿಫಲವಾಗಿದೆ. ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಿ ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಮನವಿ ಮೂಲಕ ಆಗ್ರಹಿಸಿದರು.