ವಿಜಯಸಾಕ್ಷಿ ಸುದ್ದಿ, ಗದಗ : ವಿಜಯದಶಮಿಯ ದಿನ ಗೋಸಾವಿ ಸಮಾಜ ಬಾಂಧವರು ದುರ್ಗಾದೇವಿ ಮೂರ್ತಿಯನ್ನು ವಿಸರ್ಜನೆ ಮಾಡಿ ಬರುವಾಗ ಒಂದು ನಿರ್ದಿಷ್ಟ ಸಮುದಾಯದ ಯುವಕರು ಹಲ್ಲೆ ನಡೆಸಿದ ಘಟನೆ ಲಕ್ಷ್ಮೇಶ್ವರದಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಬಂದ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ ಎಂದು ಶ್ರೀರಾಮ ಸೇನಾ, ಗೋಸಾವಿ ಸಮುದಾಯದ ನೂರಾರು ಜನರು ಶಿಗ್ಲಿ ವರ್ತುಳದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು, ಹಿಂದೂ ಯುವಕರನ್ನು ಥಳಿಸಿದ ಒಂದು ನಿರ್ದಿಷ್ಟ ಕೋಮಿನ ಯುವಕರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಇದೇ ಪ್ರಕರಣಕ್ಕೆ ಸಂಬಂಧಿಸಿ, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ರಾಜೂ ಖಾನಪ್ಪನವರ, ಲಕ್ಷ್ಮೇಶ್ವರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಆಕ್ರಮ ಮರಳುಗಾರಿಕೆ ನಡೆಯುತ್ತಿದೆ.
ಪರಿಣಾಮ, ಸರಕಾರಕ್ಕೆ ಬರಬೇಕಾದ ರಾಜಸ್ವ ಬಾರದಂತಾಗಿದೆಯೆಂದು ಆರೋಪಿಸಿದರು.
ಗದಗ ಡಿಎಸ್ಪಿ ಜೆ.ಎಚ್. ಇನಾಮದಾರ ಮನವಿ ಸ್ವೀಕರಿಸಿ, ಸೂಕ್ತ ಕ್ರಮ ಜರುಗಿಸುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನಾದ ರಾಜ್ಯ ಶಾರೀರಿಕ ಪ್ರಮುಖ ಮಹೇಶ ರೋಖಡೆ, ಬಸವರಾಜ ಕುರ್ತಕೋಟಿ, ಸತೀಶ ಕುಂಬಾರ, ಚೇತನ ಅಬ್ಬಿಗೇರಿ, ಸುನೀಲ ಮುಳ್ಳಾಳ, ತಾಬಾಳಪ್ಪ ಗೋಸಾವಿ, ಹರೀಶ ಗೋಸಾವಿ, ಆಶಾ ಗೋಸಾವಿ, ವೆಂಕಟೇಶ ಗೋಸಾವಿ, ಕೃಷ್ಣ ಗೋಸಾವಿ, ರಾಜಾ ಗೋಸಾವಿ, ಬಸವರಾಜ ಚಕ್ರಸಾಲಿ, ಪ್ರಾಣೇಶ ವ್ಯಾಪಾರಿ, ಮಹಾಂತೇಶ ಅಣ್ಣಿಗೇರಿ, ಆಕಾಶ ಗೋಸಾವಿ, ಕಿಶನ್ ಗೋಸಾವಿ, ಆರತಿ ಗೋಸಾವಿ, ಕಿರಣ ಚಿಲ್ಲೂರಮಠ, ಮಂಜು ಕೊಡಲ್ಲಿ, ಚಿನ್ನು ಹಲ್ದೊಟದ, ರಾಮು ಗೋಸಾವಿ, ಮಹಾಂತೇಶ ಪಾಟೀಲ, ಭರತ್ ಲದ್ದಿ, ಶಿವು ಲದ್ದಿ, ಅಶೋಕ ಭಜಂತ್ರಿ ಮುಂತಾದವರಿದ್ದರು.
ಅಮಾಯಕ ಹಿಂದೂಗಳ ಮೇಲೆ ಅನ್ಯ ಕೋಮಿನ ಯುವಕರು ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ನ್ಯಾಯ ಕೇಳಲು ಹೋದ ಗೋಸಾವಿ ಸಮಾಜದ ಯುವಕರು, ಮಹಿಳೆಯರು, ಹಿಂದೂ ಕಾರ್ಯಕರ್ತರ ಮೇಲೆ ಲಾಠಿ ಪ್ರಯೋಗಿಸಿದ ಪೊಲೀಸ್ ಅಧಿಕಾರಿಯನ್ನು ಕೂಡಲೇ ಅಮಾನತ್ತು ಮಾಡಬೇಕು. ತಪ್ಪಿದಲ್ಲಿ ಲಕ್ಷ್ಮೇಶ್ವರ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು.
– ರಾಜು ಖಾನಪ್ಪನವರ.
ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ.