ವಿಜಯಸಾಕ್ಷಿ ಸುದ್ದಿ, ರೋಣ: ರಾಜ್ಯ ಸರಕಾರ ಪರಿಶಿಷ್ಠ ಪಂಗಡದಲ್ಲಿ ಅನ್ಯ ಜಾತಿಗಳನ್ನು ಸೇರಿಸಲು ಹೊರಟಿರುವುದು ಖಂಡನೀಯವಾಗಿದ್ದು, ಸರಕಾರ ಈ ಕಾರ್ಯದಿಂದ ಹಿಂದೆ ಸರಿಯಬೇಕು ಎಂದು ವಾಲ್ಮೀಕಿ ಸಮುದಾಯದ ಅಧ್ಯಕ್ಷ ಬಸವರಾಜ ತಳವಾರ ಹೇಳಿದರು.
ಅವರು ಗುರುವಾರ ವಾಲ್ಮೀಕಿ ಸಮಾಜದ ವತಿಯಿಂದ ಜರುಗಿದ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ ನಡೆದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದರು.
ರಾಜ್ಯದಲ್ಲಿರುವ ಪರಿಶಿಷ್ಠ ಪಂಗಡಗಳು ಅಭಿವೃದ್ಧಿಯಿಂದ ವಂಚಿತಗೊಂಡಿವೆ. ಹೀಗಿರುವಾಗ ರಾಜ್ಯ ಸರಕಾರ ಬೇರೆ ಜಾತಿಗಳನ್ನು ಎಸ್ಟಿ ಸಮುದಾಯಕ್ಕೆ ಸೇರಿಸುವ ಹುನ್ನಾರ ನಡೆಸಿರುವುದು ಖಂಡನೀಯ. ಈ ಕೂಡಲೇ ಸರಕಾರ ಹಿಂದೆ ಸರಿಯದಿದ್ದರೆ ಸಮಾಜ ಬಂಧುಗಳು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಪುರಸಭೆ ಸದಸ್ಯ ಸಂತೋಷ ಕಡಿವಾಲ ಮಾತನಾಡಿ, ರಾಜ್ಯ ಸರಕಾರದ ಕ್ರಮ ವಾಲ್ಮೀಕಿ ಸಮುದಾಯವನ್ನು ಬಲಹೀನಗೊಳಿಸುವ ತಂತ್ರವಾಗಿದೆ. ಸರಕಾರ ತುಳಿತಕ್ಕೆ ಒಳಗಾದ ಸಮಾಜ ಮತ್ತು ಸಮುದಾಯಗಳ ಪರ ಇರಬೇಕೇ ಹೊರತು ಬಲಾಢ್ಯ ಸಮುದಾಯಗಳ ಪರವಾಗಿ ನಿಲ್ಲಬಾರದು. ಪರಿಶಿಷ್ಠ ಪಂಗಡಕ್ಕೆ ಯಾವ ಜನಾಂಗವನ್ನೂ ಸೇರ್ಪಡೆ ಮಾಡದೆ ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ವಾಲ್ಮೀಕಿ ಸಮಾಜದ ನಾಗರಿಕರು ಪಟ್ಟಣದ ಸಿದ್ದಾರೂಢ ಮಠದಿಂದ ಪ್ರತಿಭಟನಾ ರ್ಯಾಲಿ ನಡೆಸಿದರು. ಸೂಡಿ ಕ್ರಾಸ್, ಮುಲ್ಲಾನಭಾವಿ, ಪೋತರಾಜನ ಕಟ್ಟೆಯ ಬಳಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಪ್ರತಿಭಟನಾ ನಿರತರು ತಹಸೀಲ್ದಾರ ನಾಗರಾಜ ಕೆ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಮಾರ ಗೌಡನ್ನವರ, ಶ್ರೀಧರ ನಾಯ್ಕ, ಹನ್ಮಂತ ತಳವಾರ, ಭೀಮಸಿ ತಳವಾರ, ಬಾಳಪ್ಪ ಪೂಜಾರ, ವೀರಣ್ಣ ತಳವಾರ, ಮಂಜು ಬಸರಕೋಡ ಮುಂತಾದವರಿದ್ದರು.