ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಭಾಗದ ಜನರ ಜೀವನಾಡಿಯಾಗಿರುವ, ನರೇಗಲ್ಲಿಗೆ ಕಲ್ಯಾಣ ಕರ್ನಾಟಕವನ್ನು ಜೋಡಿಸುವ ನರೇಗಲ್ಲ-ತೊಂಡಿಹಾಳ ರಸ್ತೆಯನ್ನು ಡಾಂಬರೀಕರಣ ಮಾಡಬೇಕು ಮತ್ತು ಪಟ್ಟಣದಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಸದಸ್ಯರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ನಾಡಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಗಜೇಂದ್ರಗಡ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ, ನರೇಗಲ್ಲದಿಂದ ಕೊಪ್ಪಳ, ಹೊಸಪೇಟೆ, ಬೆಂಗಳೂರಿಗೆ ಹೋಗಲು ಸಮೀಪದ ಮಾರ್ಗಕೊಂಡಿಯಾಗಿರುವ ನರೇಗಲ್ಲ-ತೊಂಡಿಹಾಳ ರಸ್ತೆ ಕೆಟ್ಟು ಸಂಚಾರಕ್ಕೆ ಬಾರದಂತಾಗಿ ಎಷ್ಟೋ ವರ್ಷಗಳಾದವು. ಇದರಿಂದ ಈ ದಾರಿಯಲ್ಲಿ ಸಾಗುವ ಎಲ್ಲರಿಗೂ ಬಹಳಷ್ಟು ತೊಂದರೆಯಾಗುತ್ತಿದೆ. ಅಲ್ಲದೆ ತೊಂಡಿಹಾಳ, ಬಿನ್ನಾಳ, ಬಂಡಿಹಾಳದ ಜನತೆಗೆ ಹತ್ತಿರದ ದೊಡ್ಡ ಊರೆಂದರೆ ನರೇಗಲ್ಲ. ಅವರು ರೇಷನನ್ನಿಗಾಗಿ, ಆಸ್ಪತ್ರೆಗಾಗಿ, ಚಿಕ್ಕಪುಟ್ಟ ಕೆಲಸಗಳಿಗಾಗಿ ನರೇಗಲ್ಲನ್ನೇ ಆಶ್ರಯಿಸಿದ್ದಾರೆ.
ನರೇಗಲ್ಲದ ಬಹುತೇಕ ಜಮೀನುಗಳು ಇದೇ ರಸ್ತೆಯಲ್ಲಿದ್ದು, ಅದಕ್ಕೂ ಇದು ಸಂಪರ್ಕದ ರಸ್ತೆಯಾಗಿದೆ. ರೈತರೂ ಸಹ ತಮ್ಮ ಹೊಲಗಳಿಗೆ ಹೋಗಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಆದ್ದರಿಂದ ತಕ್ಷಣವೇ ನರೇಗಲ್ಲ-ಬಂಡಿಹಾಳ ರಸ್ತೆಯನ್ನು ದುರಸ್ತಿಗೊಳಿಸಿ ಡಾಂಬರೀಕರಣ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಉಮೇಶ ಮೇಟಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ರೈತ ಘಟಕಾಧ್ಯಕ್ಷ ಶರಣಪ್ಪ ಕರಮುಡಿ, ಕಾರ್ಮಿಕ ಘಟಕಾಧ್ಯಕ್ಷ ತೌಸಿಫ್ ಢಾಲಾಯತ್, ನರೇಗಲ್ಲ ಘಟಕಾಧ್ಯಕ್ಷ ಸಿರಾಜ ಹೊಸಮನಿ, ನರಗುಂದ ತಾಲೂಕಾಧ್ಯಕ್ಷ ನಬಿಸಾಬ ಕಿಲ್ಲೇದಾರ, ರೋಣ ತಾಲೂಕಾಧ್ಯಕ್ಷ ಶರಣಪ್ಪ ಉಪ್ಪಾರ, ಗದಗ ತಾಲೂಕಾಧ್ಯಕ್ಷ ಮುತ್ತಣ್ಣ ಚೌಡನವರ, ಲಕ್ಷ್ಮೇಶ್ವರ ತಾಲೂಕಾಧ್ಯಕ್ಷ ಲೋಕೇಶ ಸುತಾರ, ಮಹಿಳಾಧ್ಯಕ್ಷೆ ಸಾವಿತ್ರಿ ಅತ್ತಿಗೇರಿ, ರಾಮನಗೌಡ ಸೇರಿದಂತೆ ನಗರ ಘಟಕ ಅಧ್ಯಕ್ಷರು, ಗ್ರಾಮ ಘಟಕದ ಅಧ್ಯಕ್ಷರು, ಕಾರ್ಯಕರ್ತರು ಪಾಲ್ಗೊಂಡಿದ್ದರು.