ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ತುಂಗಾಭದ್ರಾ ನದಿಯಿಂದ ಹುಲಿಗುಡ್ಡ ಏತ ನೀರಾವರಿ ಯೋಜನೆಯಿಂದ ಕಾಲುವೆ ಮೂಲಕ ಹರಿಸುತ್ತಿರುವ ನೀರನ್ನು ಇಲ್ಲಿನ ಕೆರೆ ತುಂಬಿಸುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘ ದೂರಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘವು, ಲಕ್ಕುಂಡಿ ಗ್ರಾಮದಲ್ಲಿರುವ ಹಾಲಗೊಂಡ ಬಸವೇಶ್ವರ ಕೆರೆ ಹಾಗೂ ದಂಡಿನ ದುರ್ಗಾದೇವಿ ಕೆರೆಗಳು ದಿನದಿಂದ ದಿನಕ್ಕೆ ಬತ್ತುತ್ತಿವೆ. ತುಂಬಿ ಹರಿಯುತ್ತಿರುವ ತುಂಗಾಭದ್ರಾ ನದಿಯ ನೀರನ್ನು ಗ್ರಾಮದ ಪಕ್ಕದ ಜಮೀನುಗಳಲ್ಲಿ ನಿರ್ಮಿಸಿರುವ ಕಾಲುವೆಯಲ್ಲಿ ಹರಿಸಬೇಕಾಗಿದೆ. ಆದರೆ, 90 ದಿನ ಮಾತ್ರ ಕಾಲುವೆಯಲ್ಲಿ ನೀರನ್ನು ಬಿಡಲಾಗುತ್ತಿದ್ದು ಈಗಾಗಲೇ 25 ದಿನಗಳು ಕಳೆದಿವೆ. ಆದರೆ ಪಕ್ಕದ ಡಂಬಳ ಕೆರೆಯನ್ನು ತುಂಬಿಸಲಾಗಿದ್ದು, ನೀರಾವರಿ ಇಲಾಖೆಯ ಅಧಿಕಾರಿಗಳು ಲಕ್ಕುಂಡಿ ಭಾಗದ ಕೆರೆಗಳಿಗೆ ನೀರು ತುಂಬಿಸಲು ತಾರತಮ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಅಧಿಕಾರಿಗಳನ್ನು ಸಂಪರ್ಕಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈಗಾಗಲೇ ಈ ಭಾಗದಲ್ಲಿ ಸಮರ್ಪಕ ಮಳೆಯಿಲ್ಲದೇ ಬೆಳೆದಿರುವ ಬೆಳೆಗಳು ಒಣಗುತ್ತಿವೆ. ಆದ್ದರಿಂದ ಕಾಲುವೆ ಪಕ್ಕಕ್ಕೆ ಇರುವ ಹಳ್ಳಗಳು, ಕೆರೆ, ಕೊಳ್ಳಗಳಿಗೆ ಶೀಘ್ರವೇ ನೀರು ಪೂರೈಕೆ ಮಾಡಿ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೊಂಗಡೆ, ಗ್ರಾ.ಪಂ ಸದಸ್ಯ ರೇವಣಸಿದ್ದಪ್ಪ ಮುಳಗುಂದ, ಪ್ರಕಾಶ ಅರಹುಣಶಿ, ಮಂಜುನಾಥ ಕವಲೂರು, ರಮೇಶ ನೂಕಾಪೂರ, ಬಸಪ್ಪ ರಿತ್ತಿ ಸೇರಿದಂತೆ ನೂರಾರು ರೈತರು ಆಗ್ರಹಿಸಿದ್ದಾರೆ.