ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತ ಭವನಕ್ಕೆ ಬಸ್ ಸಂಚಾರ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ಸರಕಾರಿ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ನೇತೃತ್ವದಲ್ಲಿ ಕೆಎಸ್ಆರ್ಟಿಸಿ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ಗದಗ ಜಿಲ್ಲಾಡಳಿತ ಭವನಕ್ಕೆ ಬಸ್ ಸಂಚಾರವಿತ್ತು. 3 ತಿಂಗಳ ಹಿಂದೆ ಈ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಯಿತು. ಗದಗ ಜಿಲ್ಲಾಡಳಿತ ಭವನಕ್ಕೆ ದಿನ ನಿತ್ಯ ನೂರಾರು ನಾಗರಿಕರು ಕಾರ್ಯ ನಿಮಿತ್ತ ಬರುತ್ತಾರೆ. ಅವರು ಸಂಚಾರಕ್ಕಾಗಿ ಪರದಾಡುತ್ತಿರುವ ಹಿನ್ನೆಲೆಯಲ್ಲಿ ತಕ್ಷಣವೇ ಗದಗ ಜಿಲ್ಲಾಡಳಿತ ಭವನಕ್ಕೆ ಬಸ್ ಸಂಚಾರ ಸೌಲಭ್ಯವನ್ನು ಕಲ್ಪಿಸಬೇಕೆಂದು ನಿಯೋಗ ಮನವಿ ಮಾಡಿತು. ಸರಕಾರಿ ನೌಕರ ನಿಯೋಗಕ್ಕೆ ಸ್ಪಂದಿಸಿದ ಕೆಎಸ್ಆರ್ಟಿಸಿ ಜಿಲ್ಲಾಧಿಕಾರಿಗಳು, ಬಸ್ ಸೌಲಭ್ಯವನ್ನು ಪ್ರಾರಂಭಿಸುವ ಕುರಿತು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸರಕಾರಿ ನೌಕರ ಸಂಘದ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಗೌರವಾಧ್ಯಕ್ಷ ಡಿ.ಎಸ್. ತಳವಾರ, ಕೋಶಾಧ್ಯಕ್ಷ ಎಂ.ಎಂ. ನಿಟ್ಟಾಲಿ, ಹಿರಿಯ ಉಪಾಧ್ಯಕ್ಷ ಮಾರುತಿ ಮಂಗಳಾಪೂರ, ಜಿ.ಪಂ ಎ.ಎಸ್.ಓ ಅರವಿಂದ ಬಂಡಿ ಮುಂತಾದವರಿದ್ದರು.