ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯಾದ್ಯಂತ ಬಿಬಿಎಂಪಿ ಸೇರಿದಂತೆ, ಮಹಾನಗರ ಪಾಲಿಕೆ, ನಗರ ಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 709 ಕ್ಕೂ ಹೆಚ್ಚು ಸ್ಲಂಗಳು ಖಾಸಗಿ ಒಡೆತನದಲ್ಲಿದ್ದು, ಇಂತಹ ಪ್ರದೇಶಗಳನ್ನು ಗುರುತಿಸಿ ರಾಜ್ಯ ಸರ್ಕಾರ ತಕ್ಷಣ ಸ್ಲಂ ಕಾಯ್ದೆ 1973ರ ಪ್ರಕಾರ ಘೋಷಣೆ ಮಾಡಿ ಸ್ಥಳೀಯ ನಿವಾಸಿಗಳಿಗೆ ನಾಗರಿಕ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳ ಗಮನಕ್ಕೆ ತರುವಂತೆ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಕಾನೂನು, ಪ್ರವಾಸೋದ್ಯಮ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಮಾತನಾಡಿ, ನಗರ ಪ್ರದೇಶದಲ್ಲಿ ಆರೋಗ್ಯಕ್ಕೆ ಹಾನಿಕಾರಕ ಮತ್ತು ಮನುಷ್ಯ ವಾಸ ಯೋಗ್ಯವಲ್ಲದ ಅಥವಾ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುವ ಯಾವುದೇ ಜನವಸತಿ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಆದ್ದರಿಂದ ಈ ಸುತ್ತೋಲೆ ಸಂವಿಧಾನ ಬದ್ಧವಾಗಿ ಜಾರಿಯಾಗಿರುವ ಸ್ಲಂ ಕಾಯಿದೆಗೆ ವಿರುದ್ಧವಾಗಿದೆ.
ಸರ್ಕಾರ ಸ್ಲಂ ನಿವಾಸಿಗಳ ಭೂಸ್ವಾಧೀನಕ್ಕೆ ಹಣ ನೀಡುತ್ತಿಲ್ಲ. ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶದ ಘೋಷಣೆಗೆ ತೊಡಕಾಗಿರುವ ಸುತ್ತೋಲೆಯನ್ನು ಈ ಕೂಡಲೇ ಸಾರ್ವಜನಿಕ ಹಿತದೃಷ್ಟಿಯಿಂದ ಹಿಂಪಡೆಯುವAತೆ ಬರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸಿ ಸ್ಲಂ ಜನರ ವಿರೋಧಿ ಸುತ್ತೋಲೆಯನ್ನು ಕೈಬಿಡಬೇಕೆಂದು ಮನವಿಯ ಮೂಲಕ ಸಚಿವರಿಗೆ ಒತ್ತಾಯಿಸಿದರು.
ಗದಗ ಜಿಲ್ಲಾ ಸ್ಲಂ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಸ್ಲಂ ಸಮಿತಿ ಮುಖಂಡರಾದ ಮೆಹಬೂಬಸಾಬ ಬಳ್ಳಾರಿ, ಮೌಲಾಸಾಬ ಗಚ್ಚಿ, ಬಾಷಾಸಾಬ ಡಂಬಳ, ದುರ್ಗಪ್ಪ ಮಣ್ಣವಡ್ಡರ, ಇಬ್ರಾಹಿಮ ಮುಲ್ಲಾ, ಮಕ್ತುಮಸಾಬ ಮುಲ್ಲಾನವರ, ಶಂಕ್ರಪ್ಪ ರೋಣ, ಖಾಜಾಸಾಬ ಇಸ್ಮಾಯಿಲನವರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.