ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರು ಗುರುವಾರ ವಿವಿಧ ಯೋಜನೆಗಳ ಅನುದಾನದಲ್ಲಿ ತಾಲೂಕಿನ ಗ್ರಾ.ಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಿದ ಕಾಮಗಾರಿಗಳನ್ನು ಪರಿಶೀಲಿಸಿದರು.
ಜಿ.ಪಂ ಮತ್ತು ತಾ.ಪಂ ಅನಿರ್ಬಂಧಿತ ಅನುದಾನದಲ್ಲಿ ಲಕ್ಷ್ಮೇಶ್ವರ ಪಟ್ಟಣದ ದೇವರಾಜ ಅರಸು ವಸತಿ ನಿಲಯದಲ್ಲಿ ಗ್ರಂಥಾಲಯ ಕಟ್ಟಡ, ಒಡೆಯರ ಮಲ್ಲಾಪುರದ ಮೊರಾರ್ಜಿ ವಸತಿ ಶಾಲೆಯಲ್ಲಿ ಶೌಚಾಲಯಗಳ ನವೀಕರಣ, ಆರ್ಒ ಘಟಕ ವಿಕ್ಷೀಸಿದರು. ಶಿಗ್ಲಿ ಗ್ರಾಮದಲ್ಲಿಯ ಪದವಿಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಗಣಕಯಂತ್ರಗಳ ಪೂರೈಕೆ ಹಾಗೂ ಶೌಚಾಲಯ ನವೀಕರಣ ಕಾಮಗಾರಿ, ಶಿಗ್ಲಿ ಗ್ರಾ.ಪಂ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.
ಶಿಗ್ಲಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾದ ಸಿ.ಸಿ. ರಸ್ತೆ ಕಾಮಗಾರಿಗಳ ಸ್ಥಳ ಮತ್ತು ಕಡತಗಳನ್ನು ಪರಿಶೀಲನೆ ಮಾಡಿದರು. ಎಫ್ಟಿಒ ಸೃಜನೆ ಮಾಡುವಾಗ ಎಂಬಿ ಪುಸ್ತಕದಲ್ಲಿ ದಾಖಲಿಸಿರುವ ಮೊತ್ತವನ್ನೇ ದಾಖಲಿಸಿ ಎಂಐಎಸ್ ಮಾಡುವಂತೆ ಸೂಚಿಸಿದರು. ಕಾಮಗಾರಿ ಕಡತದಲ್ಲಿ ದರಪಟ್ಟಿ ಆಹ್ವಾನ ಮತ್ತು ಪತ್ರಿಕಾ ಪ್ರಕಟಣೆಯ ದಾಖಲೆ ಇರುವಂತೆ ನೋಡಿಕೊಳ್ಳಲು ಸೂಚಿಸಿದರು.
ದೊಡ್ಡೂರ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಗ್ರಾ.ಪಂ ಕಟ್ಟಡ, ಶಾಲಾ ಶೌಚಾಲಯ, ಸಿ.ಸಿ. ಗಟಾರ, ಸಿ.ಸಿ. ರಸ್ತೆ ಮತ್ತು ಸೂರಣಗಿ ಪಂಚಾಯಿತಿ ವ್ಯಾಪ್ತಿಯ ಸುರ್ವಣಗಿರಿ ತಾಂಡಾದಲ್ಲಿ ಅಂಗನವಾಡಿಗೆ ಶೌಚಾಲಯ ಮತ್ತು ಸುಣ್ಣ-ಬಣ್ಣ ಹಚ್ಚಿದ ಕಾಮಗಾರಿ, ನರೇಗಾ ಯೋಜನೆಯ ಸಿ.ಡಿ. ನಿರ್ಮಾಣ ಕಾಮಗಾರಿ ಮತ್ತು ಎನ್ಆರ್ಎಲ್ಎಂ ಕಟ್ಟಡ ಕಾಮಗಾರಿ ಪರಿವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಶಿವಕುಮಾರ ವಾಲಿ, ರವಿ ಕೊರಕನವರ, ಜಿ.ಎಂ. ರೋಣದ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಲಭ್ಯವಾಗುವ ಸೌಲಭ್ಯಗಳನ್ನು ನಿಯಮಾನುಸಾರ ವಿತರಣೆ ಮಾಡಬೇಕು ಎಂದು ಹಾಸ್ಟೆಲ್ ಸಿಬ್ಬಂದಿಗೆ ಸೂಚನೆ ನೀಡಿದರು. ವಿದ್ಯಾರ್ಥಿ ನಿಲಯ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಅಡುಗೆ ಕೋಣೆಯನ್ನು ಸದಾ ಸ್ವಚ್ಛವಾಗಿರಿಸಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದ್ದು, ಉತ್ತಮವಾದ ಶುಚಿ-ರುಚಿಯಾದ ಆಹಾರ ಒದಗಿಸಬೇಕು ಎಂದು ಹಾಸ್ಟೆಲ್ ವಾರ್ಡ್ನ್ಗಳಿಗೆ ಸಿಇಓ ಭರತ್ ಎಸ್ ತಿಳಿಸಿದರು.