ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದ ನೈಋತ್ಯ ರೈಲ್ವೆ ವಲಯದ ಅಡಿಯಲ್ಲಿ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಒಟ್ಟು 91.33 ಕೋಟಿ ರೂ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿದ ಗದಗ ರೈಲು ನಿಲ್ದಾಣದ ಹೊರಭಾಗದಲ್ಲಿ ಅತ್ಯವಶ್ಯಕ ಮೂಲಭೂತ ಸೌಕರ್ಯಗಳಾದ ಮೂತ್ರಾಲಯ, ಶೌಚಾಲಯ, ಸ್ನಾನಗೃಹ ಮತ್ತು ಎ.ಟಿ.ಎಮ್. ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಅರಿವು ಫೌಂಡೇಶನ್ ಅಧ್ಯಕ್ಷ ವಿಶ್ವನಾಥ ಶೀರಿ ಕೋರಿದ್ದಾರೆ.
ಗದಗ ರೈಲು ನಿಲ್ದಾಣಕ್ಕೆ ದಿನನಿತ್ಯ 25ಕ್ಕೂ ಹೆಚ್ಚು ರೈಲುಗಳು ಓಡಾಡುತ್ತಿದ್ದು, ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಆದರೆ ಇಲ್ಲಿ ಪ್ರಯಾಣಿಕರ ಹೊರತಾಗಿ ಇತರರು ಶೌಚಕ್ರಿಯೆಗೆ ಬಯಲು ಜಾಗವನ್ನು ಆಶ್ರಯಿಸಬೇಕಾಗಿದೆ. ರೈಲು ನಿಲ್ದಾಣದ ಒಳಭಾಗದಲ್ಲಿ ಇರುವ ಸೌಲಭ್ಯಗಳನ್ನು ಪಡೆಯಲು ಒಳಗಡೆ ಪ್ರವೇಶಿಸಲು ಪ್ಲಾಟ್ಫಾರಂ ಟಿಕೆಟ್ ಕಡ್ಡಾಯವಾಗಿ ಇರುವುದರಿಂದ ಟಿಕೆಟ್ ಹಾಗೂ ಶೌಚಾಲಯದ ಪಾವತಿ ಮೊತ್ತ ಆರ್ಥಿಕ ಹೊರೆ ಆಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ವ್ಯವಸ್ಥೆಯನ್ನು ನೋಡಿಯೂ ಸುಮ್ಮನಿರುವುದು ವಿಷಾದನೀಯ ಸಂಗತಿ ಎಂದಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರೈಲ್ವೆ ಇಲಾಖೆ, ಜಿಲ್ಲಾಡಳಿತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ರೈಲು ನಿಲ್ದಾಣದ ಹೊರಭಾಗದ ಪರಿಸರವನ್ನು ಸ್ವಚ್ಛವಾಗಿ ಇಡಲು ಪಣ ತೊಡಬೇಕಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.