ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ರೈತರ ಮುಂಗಾರಿನ ಬಹುಮುಖ್ಯ ಬೆಳೆ ಹೆಸರು ಬೆಳೆ ಅತಿಯಾದ ಮಳೆ, ತೇವಾಂಶ ಹೆಚ್ಚಳದಿಂದ ಬೇರು ಕೊಳೆ, ಹಳದಿ ರೋಗಕ್ಕೆ ತುತ್ತಾಗಿ ಬಹುತೇಕ ಬೆಳೆ ಹಾನಿಯಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತ, ವಿಮಾ ಕಂಪನಿಗಳಿಗೆ ವಸ್ತುಸ್ಥಿತಿ ವಿವರಿಸಿ ಬೆಳೆಹಾನಿ ಪರಿಹಾರ ಮತ್ತು ವಿಮಾ ಸೌಲಭ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಲಕ್ಷ್ಮೇಶ್ವರ ತಾಲೂಕಾ ಕೃಷಿಕ ಸಮಾಜದ (ನವದೆಹಲಿ) ಅಧ್ಯಕ್ಷ ಚನ್ನಪ್ಪ ಷಣ್ಮುಕಿ ನೇತೃತ್ವದಲ್ಲಿ ರೈತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಸಕಾಲಿಕ ಮಳೆಯಿಂದಾಗಿ ಈ ವರ್ಷ ಜೂನ್ ಮೊದಲ ವಾರದಲ್ಲಿಯೇ ತಾಲೂಕಿನಾದ್ಯಂತ ನೂರಾರು ಎಕರೆ ವ್ಯಾಪ್ತಿಯಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. ಬಿತ್ತನೆ ನಂತರ ಅತಿಯಾದ ಮಳೆಯಿಂದ ಜಮೀನಿನಲ್ಲಿ ನೀರು ನಿಂತು ಮೊಳಕೆ ಹಂತದ ಬೆಳೆ ಕೊಳೆತು ಹೋಯಿತು. ಅಳಿದುಳಿದ ಬೆಳೆಯೂ ಅತಿಯಾದ ತೇವಾಂಶದಿಂದ ಹಾಳಾಗುತ್ತಿದೆ. ಒಂದು ಎಕರೆ ಕ್ಷೇತ್ರದಲ್ಲಿ ಹೆಸರು ಬಿತ್ತನೆಗೆ ಬೀಜ, ಗೊಬ್ಬರ ಇತರೆಲ್ಲ ವೆಚ್ಚ ಸೇರಿ 20 ಸಾವಿರ ರೂ ಖರ್ಚು ಮಾಡಲಾಗಿದೆ. ಮುಂದೇನು ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಈ ನಿಟ್ಟಿನಲ್ಲಿ ತುರ್ತಾಗಿ ತಹಸೀಲ್ದಾರು, ಕೃಷಿ ಇಲಾಖೆಯವರು ಬೆಳೆಹಾನಿ ಕ್ಷೇತ್ರಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಹೆಸರು ಬಿತ್ತನೆ ಮಾಡಿದ ರೈತರು ಬೆಳೆಗೆ ಬೆಳೆ ವಿಮೆ ಪಾವತಿಸಿದ್ದು, ಸದ್ಯದಲ್ಲಿ ಬೆಳೆ ದೃಢೀಕರಣ/ಜಿಪಿಎಸ್ ಮಾಡುತ್ತಿದ್ದಾರೆ. ವಿಮಾ ಕಂಪನಿ ಜತೆ ಚರ್ಚಿಸಿ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು ಎಂದರು.
ಈ ವೇಳೆ ಸುರೇಶ ಸಿಂದಗಿ, ಪಕ್ಕೀರಪ್ಪ ಹೂಗಾರ, ಗಿರಿಯಪ್ಪಗೌಡ ಪಾಟೀಲ, ವೆಂಕಟೇಶ ಪಾಟೀಲ, ಜಗನಾಥಗೌಡ ಪಾಟೀಲ, ಪ್ರಕಾಶ ಶಿಂದಗಿ, ನಾಗರಾಜ ಜಂತ್ಲಿ, ಮಲ್ಲನಗೌಡ ಪಾಟೀಲ, ರಮೇಶ ಸಿದ್ದನಗೌಡ, ದ್ಯಾವನಗೌಡ ಧೇಶಿ, ಷಣ್ಮುಖಗೌಡ ಪಾಟೀಲ, ಶೇಖರಪ್ಪ ಸೊರಟೂರ, ಮಹಾಂತಪ್ಪ ಸೊರಟೂರ, ಮಹಾದೇವಪ್ಪ ಕುಂದಗೋಳ ಮುಂತಾದವರಿದ್ದರು.