ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಾಜಿ ಸಚಿವ ಕಳಕಪ್ಪ ಬಂಡಿಯವರು ಸೋಮವಾರ ಗಜೇಂದ್ರಗಡದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ತಹಸೀಲ್ದಾರರಿಗೆ ವೈಯಕ್ತಿಕ ನಿಂದನೆ ಹಾಗೂ ಅಸಾಂವಿಧಾನಿಕ ಭಾಷೆ ಉಪಯೋಗ ಮಾಡಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಬೆದರಿಕೆ ತೋರಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಲಕ್ಷ್ಮೇಶ್ವರ ತಾಲೂಕಾ ರಾಜ್ಯ ಸರಕಾರಿ ನೌಕರರ ಸಂಘದವರು ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಅರ್ಪಿಸಿದರು.
ಗಜೇಂದ್ರಗಡದಲ್ಲಿ ರಾಜ್ಯದ ರೈತರ, ದೇವಾಲಯ ಹಾಗೂ ಮಠ-ಮಾನ್ಯಗಳ ಅಸ್ತಿಗಳ ಮೇಲೆ ವಕ್ಫ್ ಬೋರ್ಡ್ ಹೆಸರು ದಾಖಲಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ರಾಜ್ಯ ಬಿಜೆಪಿ ಕರೆ ನೀಡಿದ್ದ ಪ್ರತಿಭಟನೆ ಅಂಗವಾಗಿ ಸೋಮವಾರ ಮಾಜಿ ಸಚಿವ ಕಳಕಪ್ಪ ಬಂಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲು ಕಚೇರಿ ಮುಂದೆ ಬಂದು ಕರ್ತವ್ಯ ನಿರತ ಗಜೇಂದ್ರಗಡ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಇವರಿಗೆ ಸಾರ್ವಜನಿಕರೆದುರೇ ಏಕವಚನದಿಂದ ನಿಂದಿಸಿ, ಕಂದಾಯ ಇಲಾಖೆಯ ಅಧಿಕಾರಿ ಹಾಗೂ ನೌಕರರಿಗೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ತೊಂದರೆಯುಂಟು ಮಾಡಿದ್ದಾರೆ. ಪ್ರತಿದಿನ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಇಲಾಖೆಯ ಅಧಿಕಾರಿಗಳು ಮತ್ತು ನೌಕರರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ವಿನಂತಿಸಿದರು.
ತಹಸೀಲ್ದಾರ ವಾಸುದೇವ ಸ್ವಾಮಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಉಪತಹಸೀಲ್ದಾರ ಪ್ರಶಾಂತ ಕಿಮಾಯಿ, ಇಓ ಕೃಷ್ಣಪ್ಪ ಧರ್ಮರ, ಜಿ.ಡಿ. ಹವಳದ, ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಡಿ.ಎಚ್. ಪಾಟೀಲ, ಅಧ್ಯಕ್ಷ ಎಂ.ಎ. ನದಾಫ್, ಬಸವರಾಜ ಯತ್ನಳ್ಳಿ, ಮಂಜುನಾಥ ವಾರದ ಮುಂತಾದವರಿದ್ದರು.