ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದ ಕಡೆಯ ವ್ಯಕ್ತಿಗೂ ವಿವಿಧ ಅಂಚೆ ಸೇವೆ ಕಲ್ಪಿಸುವ ಸದಾವಕಾಶ ಲಭಿಸಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಅಭಿಪ್ರಾಯಪಟ್ಟರು.
ಭಾರತೀಯ ಅಂಚೆ ಇಲಾಖೆಯ ಆಶ್ರಯದಲ್ಲಿ ಜೆ.ಟಿ. ಕಾಲೇಜಿನ ಸಭಾ ಭವನದಲ್ಲಿ ಸೋಮವಾರ ನಡೆದ ಗದಗ ವಿಭಾಗ ಮಟ್ಟದ ಪ್ರಶಸ್ತಿ ವಿತರಣೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಪದವಿ ಸೇರಿದಂತೆ ವಿವಿಧ ಕ್ಷೇತ್ರದ ಜನರನ್ನು ಅಂಚೆ ಜೀವ ವಿಮೆ ಕ್ಷೇತ್ರದ ವ್ಯಾಪ್ತಿಗೆ ತರುವ ಸದಾವಕಾಶ ಅಂಚೆ ಇಲಾಖೆಗೆ ಸಿಕ್ಕಿದೆ. ಈ ಯೋಜನೆ ಲಾಭವನ್ನು ಗ್ರಾಹಕರಿಗೆ ತಲುಪಿಸುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲು ಮುಂದಾಗಬೇಕು ಎಂದರು.
ಗ್ರಾಹಕರಿಗೆ ತಂತ್ರಜ್ಞಾನದ ಕೆಲವು ಉನ್ನತ ಅನುಕೂಲಗಳು ಮತ್ತು ಸೇವಾ ವಲಯದಲ್ಲಿ ಹೊಸ ನೀತಿ ರೂಪಿಸುವ ಸಲುವಾಗಿ ಕೇಂದ್ರ ಸರ್ಕಾರ ವಿವಿಧ ಮಹತ್ವದ ಯೋಜನೆಗಳನ್ನು ದೇಶದ ಎಲ್ಲೆಡೆ ಪರಿಚಯಿಸಲು ಅಂಚೆ ಇಲಾಖೆ ಬಗ್ಗೆ ಒಲವು ತೋರುತ್ತಿದೆ. ಹಾಗಾಗಿ ಅಂಚೆ ಇಲಾಖೆ ಸಿಬ್ಬಂದಿ ಕೇಂದ್ರ ಸರ್ಕಾರ ಅಂಚೆ ಇಲಾಖೆಯ ಮೂಲಕ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸದ ಹೊಣೆಗಾರಿಕೆಯನ್ನು ಗ್ರಾಹಕರ ವಿಶ್ವಾಸಾರ್ಹತೆಗೆ ತಕ್ಕಂತೆ ಸೇವೆ ನೀಡಲು ಮುಂದಾಗಬೇಕು ಎಂದರು.
ರೋಣ ಉಪ ವಿಭಾಗದ ಅಂಚೆ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ ಮಾತನಾಡಿ, ರೋಣ ಉಪ ವಿಭಾಗದ ಪ್ರತಿಯೊಬ್ಬ ಉದ್ಯೋಗಿಗಳು ಪರಸ್ಪರ ಪ್ರೀತಿ, ವಿಶ್ಚಾಸ ಸ್ನೇಹಪರ ಪಾಲ್ಗೊಳ್ಳುವಿಕೆಯಿಂದಾಗಿ ಗದಗ ವಿಭಾಗ ರಾಷ್ಟ್ರ ಹಾಗೂ ರಾಜ್ಯ, ವಲಯ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದರು.
ಅಂಚೆ ಸಹಾಯಕ ಬಸವರಾಜ ಸೇಡದ ಮಾತನಾಡಿ, ಜೂನ್ 23ರಂದು ಗದಗ ವಿಭಾಗದ ಎಲ್ಲೆಡೆ ಐಟಿ 2.0 ಅನುಷ್ಠಾನಕ್ಕೆ ಬರಲಿದೆ. ಈ ಕೆಲಸ ಪತ್ರ ಬಟವಾಟೆ ಸೇವಾ ಕ್ಷೇತ್ರದಲ್ಲಿ ಹೊಸ ಭಾಷ್ಯವಾಗಲಿದೆ ಎಂದರು.
ಗದಗ ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕ ಸುನೀಲಕುಮಾರ, ಪ್ರಧಾನ ಅಂಚೆ ಪಾಲಕರಾದ ಮಂಜುಳಾ ಎನ್.ದಂಗಿನಹಾಳ ಮತ್ತಿತರರು ಇದ್ದರು. ಮೇಘಾ ಕುಲಕರ್ಣಿ ಪ್ರಾರ್ಥಿಸಿದರು. ಅನಿತಾ ಕುರಿ, ಸಂತೋಷ ಅಳಗುಂಡಿ ನಿರೂಪಿದರು. ಪ್ರಧಾನ ಅಂಚೆ ಉಪ ಅಂಚೆ ಪಾಲಕರಾದ ದೊಡ್ಡಪ್ಪ ಇಟಗಿ ವಂದಿಸಿದರು.
ಗದಗ ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕ ಶ್ರೀಕಾಂತ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಚೆ ಬಟವಾಡೆ ಜೊತೆಗೆ ಉಳಿತಾಯ ಖಾತೆ, ಆರ್.ಡಿ, ಗುಂಪು ವಿಮೆ ಮತ್ತು ವಿವಿಧ ವಿಮಾ ಯೋಜನೆಗಳು ಸೇರಿದಂತೆ ಹಲವು ಬ್ಯಾಂಕಿಂಗ್ ಸೌಲಭ್ಯಗಳನ್ನು ಅಂಚೆ ಇಲಾಖೆ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಅವುಗಳ ಸದ್ಬಳಕೆಗೆ ಮುಂದಾಗಬೇಕು ಎಂದರು.