ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಿ ಸದೃಢ ದೇಶವನ್ನು ನಿರ್ಮಿಸಿಬೇಕು ಎಂದು ರಾಜ್ಯದ ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಸೋಮವಾರ ಗದಗ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಅಧ್ಯಕ್ಷರುಗಳಿಗೆ ಹಮ್ಮಿಕೊಂಡಿದ್ದ `ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ’ ಕುರಿತ ಕಾರ್ಯಾಗಾರದಲ್ಲಿ ಭಾಗವಹಿ ಅವರು ಮಾತನಾಡಿದರು.
ನಾವು ಮಾಡುವ ಕಾರ್ಯಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ನಾವು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಆದರ್ಶ ಸಮಾಜ ನಿರ್ಮಾಣವಾಗುತ್ತದೆ. ಆದರ್ಶ, ಪ್ರಾಮಾಣಿಕತೆ, ನಂಬಿಕೆ ಎನ್ನುವ ಮೌಲ್ಯಗಳ ಕುರಿತು ಮಾತನಾಡಲು ಹೆದರಿಕೆ ಬರುವ ಸಮಯದಲ್ಲಿ ಗದಗ ತಾಲೂಕಿನ ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ಬದಲಾಯಿಸಲು ವಿಶೇಷ ಪ್ರಯತ್ನ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.
ಶಾಲಾ ಮಕ್ಕಳಿಗೆ ಬಿಸಿಯೂಟ, ಸಮವಸ್ತ್ರ, ಶೂ, ಹಾಲು ಹೀಗೆ ನಾನಾ ಯೋಜನೆಗಳನ್ನು ತಂದು ಅನೇಕ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲಾಗಿದೆ. ಇನ್ನು ಬಾಕಿ ಉಳಿದ ವಿದ್ಯಾರ್ಥಿಗಳನ್ನು ಶಾಲೆಗೆ ಪುನಃ ಕರೆತಂದು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂದು ನುಡಿದರು.
ಸ್ವಾಮಿ ನಿರ್ಭಯನಂದರು ಮಾತನಾಡಿ, ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ಮೊದಲು ಬದಲಾಯಿಸಬೇಕು. ಮಗು ಮಾತೃ ಭಾಷೆಯಲ್ಲಿಯೇ ತಮ್ಮ ಪ್ರಾಥಮಿಕ ಶಾಲೆಯನ್ನು ಕಲಿಯಬೇಕು. ಸ್ವಾಮಿ ವಿವೇಕಾನಂದರ ಕಲ್ಪನೆಯ ಭಾರತ ನಿರ್ಮಾಣ ಮಾಡಲು ನಮ್ಮೆಲ್ಲರ ಮಾರ್ಗದರ್ಶನ ಸದಾ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಸ್ವಾಮಿ ಶಿವಾಪ್ರಿಯಾನಂದರು, ಡಿ.ಆರ್. ಪಾಟೀಲ, ಬಿ.ಬಿ. ಅಸೂಟಿ, ಅಕ್ಬರಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿ.ಪಂ ಸಿಇಒ ಭರತ್ ಎಸ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಜೇಂದ್ರ, ಡಿಡಿಪಿಐ ಆರ್.ಎಸ್. ಬುರಡಿ, ಶಾಲಾ ಮುಖ್ಯ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು ಹಾಜರಿದ್ದರು.
ಜೆ.ಕೆ. ಜಮಾದರ ಮಾತನಾಡಿ, ಶಿಕ್ಷಣದ ಮೂಲ ಉದ್ದೇಶ ಒಬ್ಬ ಕಾಡು ಮನುಷ್ಯನನ್ನು ಬುದ್ಧಿವಂತರಾಗಿ, ಹೃದಯವಂತರಾಗಿ, ಸಮಾಜಪ್ರಿಯ ವ್ಯಕ್ತಿಯನ್ನಾಗಿ ನಿರ್ಮಿಸಲು ಕೆ.ಎಚ್. ಪಾಟೀಲ ಪ್ರತಿಷ್ಠಾನದ ಮೂಲಕ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮೌಲ್ಯಗಳ ಕುರಿತು ಸರಿಯಾಗಿ ಮನನವಾಗುವ ಹಾಗೆ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ರಾಷ್ಟçಭಕ್ತಿ, ಸಮಾನತೆ, ಸೇವಾಭಾವ, ಸ್ವಾವಲಂಬನೆಗಳಂತಹ ಮೌಲ್ಯಗಳು ಇರುವ ಹಾಗೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಿದ್ಧಗೊಳಿಸಬೇಕು ಎಂದರು.


