‘ಚಿತ್ರ ಧ್ಯಾನ ಮಾಡೋಣ ಬನ್ನಿರಿ’ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಿಎಸ್‌ಐ ನಾಗರಾಜ ಗಡಾದ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:  ಬದುಕಿನಲ್ಲಿ ಅಜ್ಞಾನ ಹೋಗಲಾಡಿಸಿ ಸುಜ್ಞಾನದ ಬೆಳಕನ್ನು ಬೆಳಗಿಸು ಎಂದು ಶಿವನನ್ನು ಉಪವಾಸ, ಜಪ, ತಪ, ಪೂಜೆ, ಸ್ಮರಣೆ, ಭಜನೆಯ ಮೂಲಕ ಪ್ರಾರ್ಥಿಸುವ ಶುಭ ದಿನವೇ ಶಿವರಾತ್ರಿ ಎಂದು ಪಿಎಸ್‌ಐ ನಾಗರಾಜ ಗಡಾದ ಹೇಳಿದರು.

Advertisement

ಅವರು ಲಕ್ಷ್ಮೇಶ್ವರದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಹೆಸರಾಂತ ಕಲಾವಿದರು ಹಾಗೂ ಪುಲಿಗೆರೆಯ ಕಲಾ ಮನಸ್ಸುಗಳಿಂದ ಕ್ಯಾನ್ವಾಸ್‌ನಲ್ಲಿ ಶಿವ ಸ್ವರೂಪದ ಚಿತ್ರ ರಚನೆಯ ಮೂಲಕ `ಚಿತ್ರ ಧ್ಯಾನ ಮಾಡೋಣ ಬನ್ನಿರಿ’ ಎಂಬ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಣ್ಣಿಗೆ ಕಾಣದ ಭಾವಕ್ಕೆ ಮೀರಿದ, ಆದಿ-ಅಂತ್ಯವಿಲ್ಲದ ನಿರಾಕಾರ ಸ್ವರೂಪದ ಚೇತನ ಶಕ್ತಿಯೇ ಶಿವ ಪರಮಾತ್ಮ. ಶಿವರಾತ್ರಿಯ ಶುಭ ಘಳಿಗೆಯಲ್ಲಿ ಶಿವನನ್ನು ನಮ್ಮದೇ ಆದ ಶ್ರೇಷ್ಠ ಕಾರ್ಯದ ಮೂಲಕ ಶೃದ್ಧೆ, ಭಕ್ತಿ, ತನ್ಮಯತೆಯಿಂದ ಧ್ಯಾನಿಸಿದರೆ ದೇಹ ಹಾಗೂ ಮನಸ್ಸಿಗೆ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ. ಶಿವರಾತ್ರಿ ದಿನ ವಿಶೇಷವಾಗಿ ಶಿವ ಮಂದಿರಗಳಲ್ಲಿ ಪೂಜೆ, ಪ್ರಾರ್ಥನೆ, ಭಜನೆ, ಮಂತ್ರ, ಹೋಮ, ಯಾಗಗಳ ಮೂಲಕ ಅಂತರಾತ್ಮಕ್ಕೆ ಶಿವನ ಇರುವಿಕೆಯ ಅರಿವಾಗುವಂತೆ ಮಾಡುವ ಶಿವ ಧ್ಯಾನವನ್ನು ಶಿವನ ವಿವಿಧ ಸ್ವರೂಪದ ಚಿತ್ರ ಬಿಡಿಸುವ ಮೂಲಕ ಶಿವಧ್ಯಾನದ ಶ್ರೇಷ್ಠ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು.

ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಕ್ಯಾನವಾಸ್‌ನಲ್ಲಿ ತಮ್ಮದೇ ಆದ ಶಿವಸ್ವರೂಪದ ಚಿತ್ರ ಬಿಡಿಸಿ, ಶಿವನ ಹೆಸರು ಬರೆದು ಧ್ಯಾನಿಸಿದ್ದು ಕಂಡುಬಂದಿತು.

ಈ ವೇಳೆ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ದೇವಸ್ಥಾನ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಮುಖ್ಯಾಧಿಕಾರಿ ಮಹೇಶ ಹೆಚ್, ಸದಸ್ಯರಾದ ಅಶ್ವಿನಿ ಅಂಕಲಕೋಟಿ, ಪ್ರವೀಣ ಬಾಳಿಕಾಯಿ, ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಚನ್ನಪ್ಪ ಜಗಲಿ, ಸಿ.ಜಿ. ಹಿರೇಮಠ, ಮಾಲಾದೇವಿ ದಂದರಗಿ, ವಿರೂಪಾಕ್ಷ ಆದಿ, ಬಸವರಾಜ ಮೆಣಸಿನಕಾಯಿ, ನಾಗರಾಜ ಕಳಸಾಪುರ, ಎಸ್.ಎ. ಬೆಟಗೇರಿ, ಕಲಾವಿದರಾದ ರಾಜೇಶ ಉಮಚಗಿ, ಸಂತೋಷ ಕ್ಯಾದಿಗೇರಿ, ಗಂಗಾಧರ ಬಂಡಾನವರ, ಚೇತನ ಹತ್ತಿಕಾಳ, ಅರುಣ ತೊರಗಲ್, ಪ್ರಕಾಶ ಕುಂಬಾರ, ಅಶ್ವಿನಿ ಹಿರೇಮಠ, ಅಂಬಿಕಾ ಮಾದಾಪುರಮಠ, ಮಾಂತೇಶ ಕಾಶಿಕೋವಿ, ಶಿವು ಆರೇರ, ಶರಣು ಶಿವಸಿಂಪಗೇರ, ರಮೇಶ ಗಾರವಾಡ, ಅಭಿಷೇಕ ಕುಂಬಾರ, ಎಸ್.ಬಿ. ತೆಳಗಿನಮನಿ ಸೇರಿ ಹಲವರಿದ್ದರು.

ಲಜಾವರ್ ಆರ್ಟ್ ಫೌಂಡೇಶನ್‌ನ ಚಿತ್ರ ಕಲಾವಿದ/ಶಿಕ್ಷಕ ಪ್ರವೀಣ ಗಾಯಕರ ನೇತೃತ್ವದಲ್ಲಿ ನಡೆದ ಚಿತ್ರ ಧ್ಯಾನ ಕಾರ್ಯಕ್ರಮದಲ್ಲಿ ಕಲಾವಿದರ ಕುಂಚದಿಂದ ಭಗವಾನ್ ಶಿವ, ಈಶ್ವರ, ಸೋಮೇಶ್ವರ, ಶಿವಲಿಂಗ, ತ್ರಿಶೂಲ, ನಂದಿ, ಡಮರುಗ, ಶಿವ-ಪಾರ್ವತಿ, ಓಂ ನಮಃಶಿವಾಯ ಹೀಗೆ ಶಿವನ ವಿವಿಧ ರೂಪಗಳನ್ನು ಬಿಡಿಸುವ ಮೂಲಕ ಶಿವಧ್ಯಾನ ಮಾಡಿದರು.


Spread the love

LEAVE A REPLY

Please enter your comment!
Please enter your name here