ಯಾದಗಿರಿ: ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿನ ಮೃತ ಪಿಎಸ್ಐ ಪರಶುರಾಮ ಅವರ ನಿವಾಸಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರುಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕ ಮತ್ತು ಅವರ ಪುತ್ರನ ಮೇಲೆ ಆರೋಪ ಮಾಡಿದ್ದಾರೆ. ತನಿಖೆಗೆ ಆದೇಶ ಮಾಡಿದ್ದೇನೆ. ಆರೋಪ ಕೇಳಿಬಂದ ದಿನವೇ ಸಿಐಡಿ ತನಿಖೆಗೆ ಪ್ರಕರಣವನ್ನು ನೀಡಿದ್ದೇವೆ. ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಯಾರು ಕೂಡ ಹಣ ತೆಗೆದುಕೊಂಡು ವರ್ಗಾವಣೆ ಮಾಡಲ್ಲ. ವರ್ಗಾವಣೆಗೆ ಎರಡು ವರ್ಷ ನಿಗದಿ ಮಾಡಿದ್ದೇವೆ ಎಂದು ತಿಳಿಸಿದರು.
ನಾನು ವಿರೋಧ ಪಕ್ಷದವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲ್ಲ. ಸಿಬಿಐಗೆ ನೀಡುವ ಅರ್ಹತೆ ಈ ಪ್ರಕರಣದಲ್ಲಿ ಇಲ್ಲ. ಆದರೆ ಕುಟುಂಬಕ್ಕೆ ನ್ಯಾಯ ದೊರಕಿಸುವ ಕೆಲಸ ಮಾಡುತ್ತೇವೆ. ಅವರಿಗೆ ನ್ಯಾಯ ಸಿಗದೆ ಇದ್ದರೆ ಮುಂದೆ ನೋಡೋಣ. ಪರಶುರಾಮ ಅವರು ಏಳು ತಿಂಗಳಲ್ಲೇ ಹೇಗೆ ವರ್ಗಾವಣೆಯಾದರು ಅಂತ ನನಗೆ ಗೊತ್ತಿಲ್ಲ. ಅವದಿಗೂ ಮೊದಲೇ ವರ್ಗಾವಣೆ ಬಗ್ಗೆ ಕೂಡ ಸಿಐಡಿ ತನಿಖೆಯಲ್ಲಿ ಹೊರಗೆ ಬರುತ್ತದೆ ಎಂದು ಹೇಳಿದರು.