ವಿಜಯಸಾಕ್ಷಿ ಸುದ್ದಿ, ಗದಗ : ನಾದ ಬ್ರಹ್ಮ ಪುಟ್ಟರಾಜರು ಈ ಶತಮಾನದ ಅಪ್ರತಿಮ ಸಾಧಕರು. ನಮ್ಮ ನಾಡಿನ ಕೀರ್ತಿಯನ್ನು ದೇಶ-ವಿದೇಶಕ್ಕೂ ಪಸರಿಸಿದ ವiಹಾ ಚೇತನ. ದೇವರು ನೊಂದವರ-ಬೆಂದವರ ಬದುಕಿಗೆ ಬೆಳಕು ನೀಡಲು ಬೇರೆ ಬೇರೆ ಅವತಾರಗಳಲ್ಲಿ ಧರೆಗೆ ಬರುತ್ತಾರೆ. ಅದರಂತೆ ಅಂಧ-ಅನಾಥರ ಬದಕನ್ನು ಬೆಳಗಿಸಲು ಡಾ. ಪಂ ಪುಟ್ಟರಾಜ ಗವಾಯಿಗಳನ್ನು ದೇವರು ಕುರುಣಸಿದ ದೈವ ಸ್ವರೂಪಿ. ಅಂತಹ ದೇವ ಮಾನವನ ದರ್ಶನ ಪಡೆದ ನಾವೇ ಪುಣ್ಯವಂತರು ಎಂದು ವಿಜಯ ಲಲಿತಕಲಾ ಸಂಸ್ಥೆಯ ಅಧ್ಯಕ್ಷ ಪ್ರೊ. ಅಶೋಕ ಅಕ್ಕಿ ಅಭಿಪ್ರಾಯಪಟ್ಟರು.
ಇಲ್ಲಿನ ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ, ನವರಸ ಕಲಾ ಸಂಘ ಬೆಟಗೇರಿ ಹಾಗೂ ನಯನತಾರಾ ಕಲಾ ಸಂಘ ಬೆಟಗೇರಿ ಇವುಗಳ ಸಹಯೋಗದಲ್ಲಿ ನಗರದ ಶ್ರೀ ಎಸ್.ಸಿ. ಪಾಟೀಲ ಸಮೂಹ ಶಾಲೆಗಳ ಭವನದಲ್ಲಿ ಹಮ್ಮಿಕೊಂಡಿದ್ದ `ನಾದ ಬ್ರಹ್ಮನಿಗೆ ನಮನ’ ಕಾರ್ಯಕ್ರಮ, ಕಾವ್ಯ-ಕುಂಚ-ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿವಲೀಲಾ ಧನ್ನಾ ಬರೆದ `ಕಾಡ ಕುಸುಮ’ ಕವನ ಸಂಕಲವ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಶಿವಪ್ಪ ಕುರಿ, ಪುಸ್ತಕಗಳು ಕತ್ತಲ ಕೋಣೆಗಳನ್ನು ಸೇರುತ್ತಿವೆ. ಓದುವ ಆಸಕ್ತಿ ಹೆಚ್ಚಿಸಿಕೊಳ್ಳಿ. ಪುಸ್ತಕದ ವಿಷಯದಲ್ಲಿ ನಿರ್ಲಕ್ಷ್ಯ ತೋರಬೇಡಿ. ಪುಸ್ತಕಗಳು ನಿಮ್ಮ ಬದುಕನ್ನು ಬೆಳಗಿಸುವ ದೇವರು ಎಂದರು.
ಮಂಜುನಾಥ ಡೋಣಿ ಬರೆದ `ಬಾಗಿಲ ಬುತ್ತಿ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಆಯ್ಕೆ ಕಮ್ಮಾರ, ಪುಟ್ಟರಾಜನೆಂಬ ಭೂಲೋಕದ ಭಗವಂತನನ್ನು ಮತ್ತೆಂದೂ ನಾವು ನೋಡುವದಿಲ್ಲ.
ಅಂತಹ ಅಸಾಧಾರಣ ಶಕ್ತಿಯನ್ನು ಹೊಂದಿದ ಪುಟ್ಟರಾಜರು ಕವಿ, ಗಾಯಕರಾಗಿ ಕಣ್ಣಿದ್ದವರಿಗಿಂತಲೂ ಅಪಾರ ಸಾಧನೆ ಮಾಡಿದ್ದಾರೆ ಎಂದರು.
ಪುಸ್ತಕ ಪರಿಚಯ ಮಾಡಿದ ಮಂಜುಳಾ ವೆಂಕಟೇಶಯ್ಯ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ನಿರ್ಮಲಾ ತರವಾಡೆ, ಅಂದಾನೆಪ್ಪ ವಿಭೂತಿ, ಜನಪದ ವಿವಿಯ ಕುಲಸಚಿವ ಶಹಜಹಾನ ಮುದಕವಿ, ಮನ್ ಕಿ ಬಾತ್ ಖ್ಯಾತಿಯ ಕಾವೆಂಶ್ರೀ, ಎಸ್.ಎಫ್ ಕುಕನೂರ, ಬೆಳಕು ಸಂಸ್ಥೆ ರಾಯಚೂರಿನ ಅಣ್ಣಪ್ಪ ಮೇಟಿಗೌಡ, ಮಹೇಂದ್ರ ಕುರ್ಡಿ, ಶರಣಪ್ಪ ಕಡಿ ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ಶಿವಲೀಲಾ ಧನ್ನಾ ಉಪಸ್ಥಿತರಿದ್ದರು.
ಗದಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ. ಸಂತೋಷ ಅಕ್ಕಿಯವರನ್ನು ಸನ್ಮಾನಿಸಲಾಯಿತು. ನಿರ್ಮಲಾ ತರವಾಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಂಬಣ್ಣ ಪ್ರಾರ್ಥಿಸಿದರು, ಕಾರ್ಯದರ್ಶಿ ಬಸವರಾಜ ನೆಲಜೇರಿ ನಿರೂಪಿಸಿ, ವಂದಿಸಿದರು.
ಕಲಾವಿದರು ಗವಾಯಿಗಳ ಭಾವಚಿತ್ರಗಳನ್ನು ರಚಿಸಿ ಮೆಚ್ಚುಗೆ ಗಳಿಸಿದರು. ಉತ್ತಮ ಕಲಾಕೃತಿಗೆ ಪ್ರೊ. ಅಶೋಕ ಅಕ್ಕಿ ನಗದು ಬಹುಮಾನ ನೀಡಿದರು. ಗಣೇಶ ಸೇವಾ ಸಂಘದ ಗಣೇಶ ಕಬಾಡಿ, ಚೇತಕ ಸಂಸ್ಥೆಯ ಸುನಿತಾ ದೊಡ್ಡಮನಿ, ಮಹಾಂತೇಶ ಬೆರಗಣ್ಣವರ, ರಮೇಶ ಹಾದಿಮನಿ, ತ್ರಿವರ್ಣ, ಸುಭಾಸ ಸುಂಕದ, ಅನಿತಾ ಕೊಪ್ಪಳ, ನಾಗರಾಜ ಮುಖೈ, ಡಾ. ಗಣೇಶ ಸುಲ್ತಾನಪೂರ, ಕಸ್ತೂರಿ ಕಡಗದ, ಕುರಹಟ್ಟಿ ಪೇಟಿ, ಯುವಕರ ಬಳಗ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಗಾನ ಯೋಗಿಗೆ ನಮನ ಸಲ್ಲಿಸಲು ಕವಿಗಳು, ಕಲಾವಿದರು ಹಾಗೂ ಗಾಯಕರು ಆಗಮಿಸಿದ್ದೀರಿ, ಇದು ನಿಮ್ಮ ಪ್ರತಿಭೆಗೊಂದು ವೇದಿಕೆಯಾಗಿದೆ. ಅದರ ಸದುಪಯೋಗದಿಂದ ನಿಮ್ಮ ಪ್ರತಿಭೆ ಬೆಳೆಯಲಿ. ದೇವರ ದ್ಯಾನ, ಕಾಯಕ ನಿತ್ಯ ನಿರಂತರ ಮಾಡುವವನಿಗೆ ಯಾವ ಕೊರತೆಯೂ ಇರುವದಿಲ್ಲ ಎಂದು ಪ್ರೊ. ಅಶೋಕ ಅಕ್ಕಿ ಅಭಿಪ್ರಾಯಪಟ್ಟರು.