ವಿಜಯಸಾಕ್ಷಿ ಸುದ್ದಿ, ಧಾರವಾಡ : ಪ್ರತಿ ವರ್ಷ ಅನೇಕ ವಾಹನ ಸವಾರರು ಹಾಗೂ ಸಂಚಾರಿಗಳು ಸಂಚಾರಿ ನಿಯಮ ಉಲಂಘನೆಯಿಂದ ಅಮಾಯಕವಾಗಿ ಜೀವ ಕಳೆದುಕೊಳ್ಳುತ್ತಾರೆ. ಸಂಚಾರ ನಿಯಮಗಳನ್ನು ಪಾಲಿಸುವುದು ಪ್ರಜ್ಞಾವಂತ ನಾಗರಿಕರ ಮೊದಲ ಕರ್ತವ್ಯವಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಹೇಳಿದರು.
ಅವರು ಬುಧವಾರ ಸಂಜೆ ಧಾರವಾಡ ನಗರದ ಆಲೂರು ವೆಂಕಟರಾವ್ (ಜುಬ್ಲಿ ಸರ್ಕಲ್) ವೃತ್ತದಲ್ಲಿ ಸಂಚಾರ ನಿಯಮಗಳ ಸಾರ್ವಜನಿಕ ಜಾಗೃತಿ ಹಾಗೂ ದೋಷಪೂರಿತ ಸೈಲೆನ್ಸರ್ಗಳನ್ನು ನಾಶಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಚಾರ ನಿಯಮಗಳ ಕುರಿತು ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳ ಮೂಲಕ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೂ ವಾಹನ ಸವಾರರು ಸರಿಯಾಗಿ ಹೆಲ್ಮೆಟ್ ಧರಿಸುವುದಿಲ್ಲ, ಸೀಟ್ ಬೆಲ್ಟ್ ಧರಿಸುವುದಿಲ್ಲ, ಸಿಗ್ನಲ್ ಜಂಪ್ ಮಾಡುವುದು, ಸಂಚಾರಿ ಸಾಮಾನ್ಯ ನಿಯಮಗಳನ್ನು ಸಹ ಪಾಲಿಸುವುದಿಲ್ಲ. ಇದರಿಂದಾಗಿ ತಮ್ಮ ಅಮೂಲ್ಯ ಜೀವವನ್ನೇ ಕಳೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.
ಅವಳಿ ನಗರದಲ್ಲಿ ವಾಹನ ದಟ್ಟಣೆ ಮಾರ್ಗಗಳನ್ನು ಗುರುತಿಸಲಾಗಿದೆ. ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಪರಿಶೀಲಿಸಲಾಗುತ್ತಿದೆ. ಪಾಲಕರು 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಾಲನೆಗೆ ನೀಡಬಾರದು. ಇದು ಅಪರಾಧವಾಗಿದ್ದು, ಅಂತ ಪಾಲಕರಿಗೆ ರೂ. 25 ಸಾವಿರ ದಂಡ ಮತ್ತು ಜೈಲು ವಾಸದ ಶಿಕ್ಷೆ ಇದೆ. ಸಾರ್ವಜನಿಕರ ಸಹಕಾರದಿಂದ ಮಾತ್ರ ಸುಗಮ ಮತ್ತು ಸುಸೂತ್ರ ಸಂಚಾರ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಧಾರವಾಡ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಟಾರ್ ಸೈಕಲ್ ಸವಾರರು ತಮ್ಮ ವಾಹನಗಳಿಗೆ ಅನಧಿಕೃತವಾಗಿ ದೋಷಪೂರಿತ ಕರ್ಕಶ ಶಬ್ದವನ್ನುಂಟುಮಾಡುವ ಸೈಲೆನ್ಸರ್ಗಳನ್ನು ಹಾಕಿಕೊಂಡು ಸಂಚರಿಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ತಂಡವನ್ನು ರಚಿಸಿ ಜಾಗೃತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಮಾರ್ಚ್ 1, 2024ರಿಂದ ಮೇ 29, 2024ರವರೆಗೆ ಧಾರವಾಡ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಚರಣೆ ನಡೆಸಿ ಒಟ್ಟು 240 ಸೈಲೆನ್ಸರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ಸುಮಾರು ರೂ. 12 ಲಕ್ಷ ರೂ.ಗಳಾಗಿದೆ. ದೋಷಪೂರಿತ ಕರ್ಕಶ ಸೈಲೆನ್ಸರ್ಗಳನ್ನು ವಶಪಡಿಸಿಕೊಂಡು ವಾಹನ ಸವಾರರಿಗೆ ತಲಾ 500 ರೂ ದಂಡ ವಿಧಿಸಿ, ವಾಹನಗಳನ್ನು ಬಿಡುಗಡೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಆಯುಕ್ತರಾದ ಕುಶಲ್ ಚೌಕ್ಸೆ, ರವೀಶ ಸಿ.ಆರ್., ಸಂಚಾರ ಸಹಾಯಕ ಪೊಲೀಸ್ ಆಯುಕ್ತ ವಿನೋದ ಮುಕ್ತೆದಾರ, ಸಂಚಾರಿ ಪೊಲೀಸ್ ಇನಸ್ಪೆಕ್ಟರ್ ಶ್ರೀನಿವಾಸ ಮೇಟಿ, ಪಿಎಸ್ಐ ನಾರಾಯಣ ಪಟವರ್ಧನ, ಶೋಭಾ ಕಂಬಿ, ಸೇರಿದಂತೆ ಇತರ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ `ಯಮ ಕಿಂಕರ’ ರೂಪಕದ ಮೂಲಕ ಸಂಚಾರ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಮುಂದಿನ ದಿನಗಳಲ್ಲಿ ಯಾವುದಾದರೂ ದೋಷಪೂರಿತ ಸೈಲೆನ್ಸರ್ ಇರುವ ವಾಹನಗಳು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಮೋಟಾರ್ ಸೈಕಲ್ ನಂಬರ್ ಸಮೇತ ಫೋಟೋ, ವಿಡಿಯೋ ಮೂಲಕ ಸಂಚಾರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 9480802037ಗೆ ವಾಟ್ಸಪ್ ಮೂಲಕ ಕಳುಹಿಸಬಹುದು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಈ ಸಂದರ್ಭದಲ್ಲಿ ತಿಳಿಸಿದರು.