ವಿಜಯಸಾಕ್ಷಿ ಸುದ್ದಿ, ಡಂಬಳ: ಜನತೆಯ ಸಹಕಾರ ಇದ್ದಾಗ ಪರಿಸರವನ್ನು ಉಳಿಸಿ-ಬೆಳೆಸಿ, ಅರಣ್ಯ ಅಪಾರವಾಗಿ ಬೆಳೆಯಲು ಸಾಧ್ಯ ಎಂದು ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ನುಡಿದರು.
ಡಂಬಳ ಹೋಬಳಿಯ ಡೋಣಿ ಗ್ರಾಮದ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗದಗ ಪ್ರಾದೇಶಿಕ ವಿಭಾಗ, ಕಪ್ಪತ್ತಗುಡ್ಡ ವನ್ಯಜೀವಿ ಧಾಮದಲ್ಲಿ ವಾಲಿಬಾಲ್ ಪಂದ್ಯಾವಳಿ, ಕಾಡ್ಗಿಚ್ಚು ತಡೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ರಾಜ್ಯದ 7 ಕೋಟಿ ಕನ್ನಡಿಗರು ಕಪ್ಪತ್ತಗುಡ್ಡದತ್ತ ನೋಡುತ್ತಿದ್ದಾರೆ. ಕಪ್ಪತ್ತಗುಡ್ಡದ ಸಸ್ಯ ಸಂಪತ್ತನ್ನು ಸುತ್ತಮುತ್ತಲಿನ ಗ್ರಾಮಸ್ಥರು ರಕ್ಷಕರಂತೆ ಕಾಪಾಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ರೈತ ಸಂಘದ ಅಧ್ಯಕ್ಷ ಶಂಕರಗೌಡ ಜಾಯನಗೌಡರ, ಎಸ್.ಸಿ ಘಟಕದ ಅಧ್ಯಕ್ಷ ಸೋಮಣ್ಣ ಹೈತಾಪುರ, ಕಪ್ಪತ್ತಗುಡ್ಡ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಭರಮಪ್ಪ ಕಿಲಾರಿ ಮಾತನಾಡಿ, ಗಿಡಗಳ, ಪ್ರಾಣಿ-ಪಕ್ಷಿಗಳ ಉಳಿವಿಗಾಗಿ ವಾಲಿಬಾಲ್ ಕ್ರೀಡಾಕೂಟದ ಮೂಲಕ ಯುವಕರಲ್ಲಿ ಜಾಗೃತಿ ಮೂಡಿಸುತ್ತಿರುವ ಹಿರಿಯ ಅರಣ್ಯ ಅಧಿಕಾರಿಗಳ, ಈ ಭಾಗದ ಆರ್ಎಫ್ಒ ಮಂಜುನಾಥ ಮೇಗಲಮನಿ ಮತ್ತು ಸಿಬ್ಬಂದಿ ವರ್ಗದವರ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.
ಯುವ ಕವಿ, ಲೇಖಕ ಸಿದ್ದು ಸತ್ಯಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಂಬಳ ಹೋಬಳಿಯ ಗ್ರಾಮಗಳ 485 ಕುರಿ ಕಾಯುವವರಿಗೆ ಹೊಟ್ಟೆ ಚೀಲ, ಬ್ಯಾಟರಿ, ಸ್ಟೀಲ್ ನೀರಿನ ಬಾಟಲ್ ವಿತರಿಸಲಾಯಿತು. ಕೃಷಿಯಲ್ಲಿ ಅರಣ್ಯ ಸಾಧಕರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 35ಕ್ಕೂ ಅಧಿಕ ಸಾಧಕರಿಗೆ, ಯೋಗಸನದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮುಂಡರಗಿ ತಾಲೂಕಿನ 23 ಗ್ರಾಮ ಪಂಚಾಯಿತಿಗಳಿಗೆ ಕಪ್ಪತ್ತಗುಡ್ಡದಿಂದ ಆಗುವ ಪರಿಸರದ ಲಾಭಗಳ ಕುರಿತಾದ ಮಾಹಿತಿ ಬೋರ್ಡ್ ವಿತರಿಸಲಾಯಿತು. ಬೈಕ್, ಕಾರ್ಗಳಿಗೆ ಕಪ್ಪತ್ತಗುಡ್ಡದ ಹೆಸರಿನಲ್ಲಿ ಪ್ರಾಣಿಗಳ ಭಾವಚಿತ್ರವುಳ್ಳ ಸ್ಟಿಕ್ಕರ್, ಭಿತ್ತಿಪತ್ರ ವಿತರಣೆ ಮಾಡಲಾಯಿತು. ಖ್ಯಾತ ಕಲಾವಿದ ನಿಂಗಪ್ಪ ಗುಡ್ಡದ ಸಂಗಡಿಗರು ಕಪ್ಪತ್ತಗುಡ್ಡದ ಕುರಿತು ಜಾನಪದ ಹಾಡುಗಳನ್ನು ಹಾಡಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ವೇ.ಮೂ. ಕುಮಾರಸ್ವಾಮಿ ಮಠದ, ಗ್ಯಾರಂಟಿ ಸಮಿತಿ ಸದಸ್ಯರಾದ ರಾಮಣ್ಣ ಮೇಗಲಮನಿ, ಗ್ರಾ.ಪಂ ಅಧ್ಯಕ್ಷೆ ನೀಲಮ್ಮ ಅಳವಂಡಿ, ಲಕ್ಷ್ಮೀ ಸೊಗಟಿ, ಕಾಶಪ್ಪ ಅಳವಂಡಿ, ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ ಪವಾರ, ಗೌಸಿದ್ಧಯ್ಯ ಹಳ್ಳಿಕೇರಿಮಠ, ನಿಂಗನಗೌಡ ಹರ್ತಿ, ಹನಮಪ್ಪ ಗೋಡಿ, ಕಾಶಪ್ಪ ಹೊನ್ನೂರ, ಸಿದ್ಧನಗೌಡ ಪಾಟೀಲ, ಸತ್ಯಪ್ಪ ಚಲವಾದಿ, ಮಹಾದೇವಪ್ಪ ಗುಂಜಿ, ಭರಮಗೌಡ ಪಾಟೀಲ, ಈಶಪ್ಪ ಓಲಿ, ಮಳ್ಳಪ್ಪ ಜೋಂಡಿ ಸೇರಿದಂತೆ ಯುವಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು. ಅರಣ್ಯಾಧಿಕಾರಿ ಮೈಲಾರಪ್ಪ ಮಡಿವಾಳರ ವಂದಿಸಿದರು.
ಮುಂಡರಗಿ ಆರ್ಎಫ್ಒ ಮಂಜುನಾಥ ಆರ್.ಮೇಗಲಮನಿ ಮಾತನಾಡಿ, ಮೌಢ್ಯ, ಕಂದಾಚಾರಕ್ಕೆ ಒಳಗಾಗಿ ಬೆಂಕಿ ಹಚ್ಚಬೇಡಿ. ಕಪ್ಪತ್ತಗುಡ್ಡ ಸರಕಾರಿ ಆಸ್ತಿ ಎಂದು ಭಾವಿಸದೆ ನಮ್ಮೆಲ್ಲರ ಆಸ್ತಿ ಎಂದು ಭಾವಿಸಿ ಕಾಪಾಡಬೇಕು. 400ಕ್ಕೂ ಹೆಚ್ಚು ಔಷಧೀಯ ಸಸ್ಯ ಸಂಪತ್ತು, 23ಕ್ಕೂ ಹೆಚ್ಚು ವನ್ಯಪ್ರಾಣಿಗಳ ಸಂಪತ್ತನ್ನು ಕಪ್ಪತ್ತಗುಡ್ಡ ಹೊಂದಿದ್ದು, ಇವುಗಳೆಲ್ಲವೂ ನಮ್ಮ ಸಂಪತ್ತು ಎಂದು ಉಳಿಸಿ ಬೆಳೆಸಬೇಕಾಗಿದೆ. ಇದನ್ನು ಉಳಿಸಿದರೆ ನಮ್ಮ ನಿಮ್ಮೆಲ್ಲರ ಮುಂದಿನ ಪೀಳಿಗೆ ಉಳಿಯಲು ಸಾಧ್ಯ. ಅತ್ಯಮೂಲ್ಯ ಸಂಪತ್ತನ್ನು ಉಳಿಸಲು ಅರಣ್ಯ ಇಲಾಖೆಯ ಜೊತೆಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಹೇಳಿದರು.



