ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ವಾರ್ಡ್ ನಂ-2ರ ದೂದನಾನಾ ದರ್ಗಾ ಬಳಿ ಇರುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಬರುವ ಭಕ್ತರು, ರೈತರು, ಮಕ್ಕಳು, ವೃದ್ಧರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ರಸ್ತೆ ದುರಸ್ಥಿಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, 50 ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿರುವ ಪಟ್ಟಣದಲ್ಲಿ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಅದರಲ್ಲೂ ರೈತಾಪಿ ವರ್ಗದವರು ಹೆಚ್ಚಾಗಿರುವ ಮತ್ತು ನಿತ್ಯ ವಿವಿಧ ಜಿಲ್ಲೆ, ರಾಜ್ಯಗಳಿಂದ ಇಲ್ಲಿನ ಪ್ರಸಿದ್ಧ ದೂದನಾನಾ ದರ್ಗಾಕ್ಕೆ ಬರುವ ಸಾರ್ವಜನಿಕರಿಗೆ ಇಲ್ಲಿನ ರಸ್ತೆಯನ್ನು ನೋಡಿ ಜನಪ್ರತಿನಿಧಿಗಳ, ಅಧಿಕಾರಿಗಳ ಆಡಳಿತ ವೈಖರಿಯನ್ನು ಶಪಿಸುವಂತಾಗಿದೆ. ಪಟ್ಟಣದಲ್ಲಿನ ಬಹುತೇಕ ರಸ್ತೆಗಳು ಹಾಳಾಗಿದ್ದು ಅಭಿವೃದ್ಧಿ, ದುರಸ್ಥಿ ಕಾಮಗಾರಿಗಳು ನಿಂತು ಹೋಗಿವೆ.
ನಗರೋತ್ಥಾನ ಕಾಮಗಾರಿಗಳು ವರ್ಷದ ಹಿಂದೆ ಮುಗಿಯಬೇಕಾಗಿದ್ದು, ಇನ್ನೂ ಪ್ರಾರಂಭದ ಹಂತದಲ್ಲಿ ನಿಂತುಕೊಂಡಿವೆ. ಪುರಸಭೆ ವ್ಯಾಪ್ತಿಯಲ್ಲಿ ಈ ರಸ್ತೆ ಬರುವದರಿಂದ ಪುರಸಭೆಯವರು ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಮುಳಗುಂದ, ಅಭಯ ಜೈನ್, ಮುತ್ತು ನೀರಲಗಿ, ಗಣೇಶ ನೂಲ್ವಿ, ಜಾವೀದ ಖಾನಜಾದೆ, ಮುಜಮಿಲ್ ಬೇಪಾರಿ, ಪ್ರಕಾಶ ಉದ್ದನಗೌಡ್ರ, ಶ್ರೀಕಾಂತ ಪಾಟೀಲ, ಇಸ್ಮಾಯಿಲ್ ಮುಳಗುಂದ, ನಿಂಗಪ್ಪ ಸಾಲಮನಿ ಶರಣಪ್ಪ ಕಣವಿ ಸೇರಿದಂತೆ ಅನೇಕರಿದ್ದರು.



