ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇಲ್ಲಿನ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ 3 ದಿನಗಳ ಕಾಲ ನಡೆಯುವ `ಪುಲಿಗೆರೆ ಉತ್ಸವ’ ಶುಕ್ರವಾರ ಪ್ರಾತಃಕಾಲ ಮಂಗಳವಾದ್ಯದೊಂದಿಗೆ ಪ್ರಾರಂಭಗೊಂಡಿತು.
ಗದುಗಿನ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯಮ ಹರ್ತಿಯ ಶಹನಾಯಿ ವಾದಕ ಎಸ್.ಬಿ. ಭಜಂತ್ರಿ ಅವರು ಅಹಿರ್ ಭೈರವ ರಾಗದೊಂದಿಗೆ ಶಹನಾಯಿ ಸಂಗೀತ ಮೊಳಗಿಸಿದರು. ತಾಳ ವಿಳಂಬಿತ ಏಕತಾಳ ಮತ್ತು ದೃತ್ ತಿನತಾಳದಲ್ಲಿ ನುಡಿಸಿದ ಶಹನಾಯಿ ವಾದನದಿಂದ ಕೇಳುಗರ ಮನಸ್ಸಿಗೆ ಆಹ್ಲಾದವನ್ನುಂಟುಮಾಡಿದರು. ಡಾ. ಹನಮಂತ ಹೂಗಾರ ತಬಲಾ, ಕು. ಸರ್ವಮಂಗಳ ಸಂಗೀತಕ್ಕೆ ಸಾಥ್ ನೀಡಿದರು.
ನಂತರ ಸ್ಥಳೀಯ ಕಲಾವಿದ-ಶಿಕ್ಷಕ ಪರಶುರಾಮ ಭಜಂತ್ರಿ ರಾಗ ಮಿಯಾಕಿ ತೋಡಿಯೊಂದಿಗೆ ತಮ್ಮ ಸಂಗೀತ ಸೇವೆ ಪ್ರಾರಂಭಿಸಿದರು. ನಂತರ ಸಂಗೀತ ಕ್ಷೇತ್ರದ ಮೇರುಪರ್ವತ ದಿಗ್ಗಜ ಪಂಡಿತ ಭೀಮಸೇನ ಜೋಶಿ ಅವರ ದ್ವನಿಯಲ್ಲಿ ವಿಶೇಷವಾಗಿ ಮೂಡಿಬರುತ್ತಿದ್ದ ಮಾಝೇ ಮಾಹೇರಾ ಪಂಡರಿ….. ಅಭಂಗ್ ಪಂ.ಜೋಶಿಯವರನ್ನು ನೆನಪಿಸುವಂತಿತ್ತು. ಅವರ ಶಿಷ್ಯಬಳಗದವರು ತಂಬೂರಿ ಸಾಥ್, ಧಾರವಾಡದ ಬಸವರಾಜ ಹಿರೇಮಠ ಹಾರ್ಮೋನಿಯ, ಸ್ಥಳೀಯ ತಬಲಾವಾದಕ ಕೃಷ್ಣಕುಮಾರ ಕುಲಕರ್ಣಿ ತಬಲಾ ಸಾಥ್ ನೀಡಿದರು.