ಬೆಂಗಳೂರು;- ಸರಳ ವ್ಯಕ್ತಿತ್ವದಿಂದಲೇ ರಾಜ್ಯದ ಮನೆಮಾತಾಗಿದ್ದ ನಟ ಪುನೀತ್ ರಾಜ್ಕುಮಾರ್ ಅವರು ಅಗಲಿ ಇಂದಿಗೆ ಎರಡು ವರ್ಷ ತುಂಬಿದೆ. ಹಾಗಾಗಿ, ಕರ್ನಾಟಕದಾದ್ಯಂತ ಅಭಿಮಾನಿಗಳು ಅಪ್ಪು ನೆನಪಿನಲ್ಲಿ ಮಿಂದೇಳುತ್ತಿದ್ದಾರೆ. ಅಲ್ಲದೆ, ಸೇವಾ ಕಾರ್ಯಕ್ರಮಗಳ ಮೂಲಕವೂ ನೆಚ್ಚಿನ ನಟನ ಸ್ಮರಣೆಯಲ್ಲಿ ತೊಡಗಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ
ಪುನೀತ್ ರಾಜ್ಕುಮಾರ್ ಅವರ 2ನೇ ವರ್ಷದ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಐವತ್ತರಿಂದ ಅರವತ್ತು ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ. ಕೇಸರಿ ಬಾತ್, ಟೊಮೇಟೊ ಬಾತ್ ಮತ್ತು ಪಲಾವ್ ಇರಲಿದೆ. ಅಪ್ಪು ಸಮಾಧಿ ಬಳಿ ಬರೋ ಅಷ್ಟೂ ಅಭಿಮಾನಿಗಳು ಊಟ ಮಾಡಿಯೇ ಹೋಗಬೇಕು ಅನ್ನೋ ಉದ್ದೇಶ ಹೊಂದಲಾಗಿದ್ದು, ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯೇ ಅಪ್ಪು ಪುಣ್ಯ ಭೂಮಿಯಲ್ಲಿ ಫ್ಯಾನ್ಸ್ ನೆರೆದಿದ್ದಾರೆ. ಇನ್ನೂ ಮತ್ತೊಂದೆಡೆ ಪ್ರತಿಬಾರಿಯಂತೆ ಕಡ್ಲೆಪುರಿ ಹಾರ ತರುವ ಅಜ್ಜಿ ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ.