ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಕನ್ನಡ ಚಲನಚಿತ್ರ ನಟ ದಿ.ಪುನಿತ್ ರಾಜಕುಮಾರ್ ಅವರ 3ನೇ ವರ್ಷದ ಪುಣ್ಯಸ್ಮರಣೆಯನ್ನು ವಿಶೇಷವಾಗಿ ಆಚರಿಸಿದರು. ಶಿಗ್ಲಿ ಗ್ರಾಮದ ಗಾಂಧಿ ನಗರದ ಕೊರಮ-ಕೊರಚ ಸಮಾಜದ ಅಪ್ಪು ಅಭಿಮಾನಿಗಳು ಬೃಹತ್ ಕಟೌಟ್ ಅಳವಡಿಸಿ ಹೂವಿನ ಹಾರ, ಜೈಕಾರ ಹಾಕಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಆರತಿ ಬೆಳಗಿ, ನಮನ ಸಲ್ಲಿಸಿದರಲ್ಲದೆ ನೂರಾರು ಜನರಿಗೆ ಪುನೀತ್ ಹೆಸರಲ್ಲಿ ಊಟ ಉಣಬಡಿಸಿದರು.
ಗ್ರಾಮದ ಕೊರವರ ಸಮಾಜದ ಪ್ರತಿಯೊಂದು ಮನೆಯಲ್ಲಿ ಅಪ್ಪು ಅಭಿಮಾನಿಗಳಿದ್ದಾರೆ. ಹೀಗಾಗಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅನ್ನಸಂತರ್ಪಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಈ ಕುರಿತು ಅಪ್ಪು ಅಭಿಮಾನಿ ಬಳಗದ ರಾಘು ಪೂಜಾರ ನುಡಿ ನಮನ ಸಲ್ಲಿಸಿ, ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದ ರಾಜಕುಮಾರ ನಮ್ಮನ್ನಗಲಿ 3 ವರ್ಷಗಳು ಕಳೆದಿವೆ. ಆದರೆ, ಅಭಿಮಾನಿಗಳ ಮನದಲ್ಲಿ ಅಪ್ಪು ಇನ್ನೂ ಅಜರಾಮರವಾಗಿದ್ದಾರೆ ಎಂದರು.
ಪುನೀತ್ ರಾಜಕುಮಾರರ ಪ್ರತಿಯೊಂದು ಚಿತ್ರಗಳು ಸಮಾಜಕ್ಕೆ ಅದರಲ್ಲೂ ಯುವಜನತೆಗೆ ಉತ್ತಮ ಸಂದೇಶ ನೀಡಿವೆ. ಅವರು ತೆರೆಮರೆಯಲ್ಲಿ ಯಾರಿಗೂ ಗೊತ್ತಾಗದಂತೆ ಮಾಡಿದ ಅನೇಕ ಸಾಮಾಜಿಕ ಕಾರ್ಯಗಳು ನಮಗೆ ಸ್ಪೂರ್ತಿಯಾಗಿವೆ. ಹೀಗಾಗಿ ಅಪ್ಪು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ಸೇರಿ ಹಲವು ಸಾಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗಂಗಪ್ಪ ಪೂಜಾರ, ವೆಂಕಟೇಶ ಗೌಳಿ, ದ್ಯಾಮಣ್ಣ ಹುರಳಿಕುಪ್ಪಿ, ಗಾಳೆಪ್ಪ ಪೂಜಾರ, ಮಾದೇವಪ್ಪ ಹರದಗಟ್ಟಿ, ಗಂಗಪ್ಪ ಕುರಿ, ವೆಂಕಟೇಶ ಮುಂಡರಗಿ, ಸುರೇಶ ಹರದಗಟ್ಟಿ, ಅಶೋಕ ಪೂಜಾರ ಸೇರಿ ಸಮಾಜದ ಯುವಕರು, ಮಕ್ಕಳು ಪಾಲ್ಗೊಂಡಿದ್ದರು.