ಪುಣ್ಯಾಶ್ರಮ ಮಾನವ ಹಕ್ಕುಗಳ ರಕ್ಷಣೆ ಮಾಡುತ್ತಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿನಲ್ಲಿ ಮಾನವ ಹಕ್ಕುಗಳ ಬಗ್ಗೆ ನಿಜವಾಗಿ ಅರ್ಥೈಸಿಕೊಂಡು ಅದನ್ನು ಜಾರಿಗೆ ತಂದ ಯಾವದಾದರೂ ಸಂಸ್ಥೆಯಿದ್ದರೆ ಅದು ಗದುಗಿನ ವೀರೇಶ್ವರ ಪುಣ್ಯಾಶ್ರಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

Advertisement

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪರಮಪೂಜ್ಯ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ವಿಕಲಚೇತನರನ್ನು ರಕ್ಷಿಸಿ ಅವರಿಗೆ ಅನ್ನ, ಶಿಕ್ಷಣ ನೀಡಿ ಸ್ವಾವಲಂಬಿಯಾಗಿಸುವ ಮೂಲಕ ದೇಶದ ಆಸ್ತಿಯನ್ನಾಗಿ ಮಾಡಿರುವುದು ಉಭಯ ಶ್ರೀಗಳ ಮಹಾನ್ ಕೆಲಸವಾಗಿದೆ. ನಾವುಗಳು ಬಸವಣ್ಣನವರ ಧಾರ್ಮಿಕ ಸಂದೇಶಗಳಿಗೆ ಮಾತ್ರ ಹೆಚ್ಚು ಒತ್ತು ಕೊಟ್ಟಿರುವದರಿಂದ ಅವರನ್ನು ರಾಜ್ಯಕ್ಕೆ ಮಾತ್ರ ಸೀಮಿತ ಮಾಡಲಾಗಿರುವದು ವಿಷಾದನೀಯ. ಬಸವಣ್ಣವರ ಆಲೋಚನೆಗಳು, ಸಂದೇಶಗಳು, ನೈಜ ವೈಕ್ತಿತ್ವವನ್ನು ವಿಶ್ವಮಟ್ಟಕ್ಕೆ ಪರಿಚಯಿಸಬೇಕಿದೆ ಎಂದು ಹೇಳಿದ ಅವರು, ಪಂ. ಪುಟ್ಟರಾಜ ಗವಾಯಿಗಳವರ ಸ್ಮಾರಕ ಭವನ ಪೂರ್ಣಗೊಳ್ಳಬೇಕು. ಇದಕ್ಕೆ ಎಲ್ಲ ಗುರುಗಳ ಆಶೀರ್ವಾದ ಬೇಕಾಗಿದೆ. ಮುಂದಿನ ವರ್ಷ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಸ್ಮಾರಕ ಭವನದಲ್ಲಿ ಜರುಗುತ್ತವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಹೂವಿನಶಿಗ್ಲಿ ವಿರಕ್ತಮಠದ ಪೂಜ್ಯಶ್ರೀ ಚನ್ನವೀರ ಮಹಾಸ್ವಾಮಿಗಳು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಅಷ್ಟಗಿ ನಿಜಲಿಂಗ ಶಿವಾಚಾರ್ಯರು, ಬೊಮ್ಮನಹಳ್ಳಿ ವಿರಕ್ತಮಠದ ಪೂಜ್ಯಶ್ರೀ ಶಿವಯೋಗೇಶ್ವರ ಮಹಾಸ್ವಾಮಿಗಳು, ಕೂಡಲ ಗುರುನಂಜೇಶ್ವರ ಮಠದ ಪೂಜ್ಯಶ್ರೀ ಗುರು ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಲಿಂಗಸೂರಿನ ಮಾಣಿಕೇಶ್ವರಿ ಆಶ್ರಮದ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ಸಮ್ಮುಖ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಪೀರಸಾಬ ಕೌತಾಳ, ಪ್ರಕಾಶ ಕರಿ, ಡಾ. ಆನಂದ ಪಾಂಡುರAಗಿ, ಸದು ಮದರಿಮಠ, ಸಂಗಮೇಶ ದುಂದೂರ, ಪರಶುರಾಮ ಕಟ್ಟಿಮನಿ, ರುದ್ರಗೌಡ ರಬ್ಬನಗೌಡ್ರ, ಅರುಣ ಕಟ್ಟಿಮನಿ, ವಿಶ್ವನಾಥ ಹೂಗಾರ, ಮಹಾಂತಯ್ಯ ಸಾಲಿಮಠ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಲಬುರಗಿಯ ಬಲವಂತ ಉದನೂರ ಹಾಗೂ ಕುಟನೂರ (ಡಿ) ಶಿವಶಂಕರ ಬಿರಾದಾರ ಅವರಿಂದ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಕಲ್ಲಯ್ಯಜ್ಜನವರಿಗೆ ತುಲಾಭಾರ ಸೇವೆ ಜರುಗಿತು. ನಂತರ ಧ್ವನಿಸುರಳಿ ಹಾಗೂ ಸಪ್ತಸ್ವರದೀಪ ಗ್ರಂಥ ಬಿಡುಗಡೆಯಾಯಿತು. ನಂತರ ಸಂಗೀತ ಸಭೆ, ಸ್ವರ ಶೃದ್ಧಾಂಜಲಿ ಸಂಗೀತ ಸಮಾರಾಧನೆ ಕಾರ್ಯಕ್ರಮ ಜರುಗಿತು.

ಗದುಗಿನ ತೋಂಟದಾರ್ಯ ಶ್ರೀ ಮಠದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಉಭಯ ಶ್ರೀಗಳು ಲೋಕ ಕಂಡ ಅದ್ಭುತ ಮಹಾಪುರುಷರು. ಪ್ರಯತ್ನ ಮಾಡಿದ ಪ್ರತಿಯೊಬ್ಬರೂ ಸಾಧನೆ ಮಾಡಲು ಸಾಧ್ಯವಾಗುವದಿಲ್ಲ. ಸಾಧನೆ ಮಾಡಿದ ಅತ್ಯಂತ ವಿರಳ ವ್ಯಕ್ತಿಗಳಲ್ಲಿ ಉಭಯ ಶ್ರೀಗಳು ಮುಂಚೂಣಿಯಲ್ಲಿದ್ದಾರೆ. ಯಾವ ಮಕ್ಕಳು ತಂದೆ-ತಾಯಿ ಹಾಗೂ ಸಮಾಜಕ್ಕೆ ಹೊರೆಯಾಗಬೇಕಾಗಿರುತ್ತಾರೆ ಅಂತಹ ಮಕ್ಕಳಿಗೆ ಸ್ವಾವಲಂಬಿ ಬದುಕನ್ನು ನೀಡಿ ಪವಾಡ ಪುರುಷರೆನಿಸಿಕೊಂಡವರು ಉಭಯ ಶ್ರೀಗಳು ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here