ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿಯವರ ಅಪ್ಪಣೆಯ ಮೇರೆಗೆ ಸಮೀಪದ ಜಕ್ಕಲಿ ಗ್ರಾಮದಲ್ಲಿ ಅಕ್ಟೋಬರ್ 1ರಂದು ಅನ್ನದಾನೇಶ್ವರ ಜಾತ್ರಾ ಮಹೋತ್ಸವ ಹಾಗೂ ನಾಲ್ವತವಾಡ ಶ್ರೀವೀರೇಶ್ವರ ಶಿವಶರಣರ ಮಹಾ ಪುರಾಣ ಪ್ರವಚನ ಮಂಗಲೋತ್ಸವ ಜರುಗಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 6ಕ್ಕೆ ಶ್ರೀಕುಂಭೇಶ್ವರ ಶಿವಲಿಂಗಕ್ಕೆ ಮಹಾ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ, 8ಕ್ಕೆ ಸೋಮಸಮುದ್ರ ಕೊಟ್ಟೂರಸ್ವಾಮಿ ಶಾಖಾ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳವರ ಅಡ್ಡಪಲ್ಲಕ್ಕಿ ಉತ್ಸವವು ಶ್ರೀಮಠದಿಂದ ಹೊರಟು ನರೇಗಲ್ಲ-ಕೋಡಿಕೊಪ್ಪದ ಪುರವಂತರು, ವಿವಿಧ ಭಜನಾ ಮೇಳಗಳು, ಕರಡಿ ಮಜಲು, ಡೊಳ್ಳು ಕುಣಿತ ಹಾಗೂ ಸುಮಂಗಲಿಯರ ಆರತಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾ ಶಿವಶರಣರಾದ ಅಣ್ಣಯ್ಯ ತಮ್ಮಯ್ಯನವರ ಪುಣ್ಯತಾಣಕ್ಕೆ ತೆರಳಲಿದೆ.
ಅಲ್ಲಿ ಶ್ರೀಗಳವರ ಪಾದ ಪೂಜೆಗೊಂಡ ಬಳಿಕ ಶ್ರೀಗಳವರ ಮಠಕ್ಕೆ ಮರಳಿ ಬರುವುದು.
ಮಧ್ಯಾಹ್ನ 1ಕ್ಕೆ ಮಹಾಗಣಾರಾಧನೆ, ಸಂಜೆ 7ಕ್ಕೆ ಧರ್ಮಸಭೆ ಹಾಗೂ ತಿಂಗಳ ಪರ್ಯಂತವಾಗಿ ಸಾಗಿ ಬಂದ ನಾಲ್ವತವಾಡ ಶ್ರೀ ವೀರೇಶ್ವರ ಶಿವಶರಣರ ಮಹಾ ಮಂಗಲಗೊಳ್ಳುವುದು. ಹಾಲಕೆರೆ ಶ್ರೀ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ, ಶಾಖಾ ಶಿವಯೋಗಮಂದಿರ ನಿಡಗುಂದಿಕೊಪ್ಪ ಅಭಿನವ ಚನ್ನಬಸವ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ, ಜೀಗೇರಿಯ ಷ.ಬ್ರ. ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ, ಬನವಾಸಿಯ ಶಿವಲಿಂಗ ದೇಶಿಕರ ನೇತೃತ್ವದಲ್ಲಿ ಧರ್ಮಸಭೆ ನಡೆಯಲಿದೆ.
ಗದಗ ವೀರೇಶ್ವರ ಪುಣ್ಯಾಶ್ರಮದ ಲಿಂ. ಪಂ. ಪುಟ್ಟರಾಜ ಗವಾಯಿಗಳ ಶಿಷ್ಯರಾದ ಬೇವೂರಿನ ವೇ.ಮೂ. ಎಂ.ಜಿ. ಗುರುಸಿದ್ದೇಶ್ವರ ಶಾಸ್ತ್ರಿಗಳು ಹಾರ್ಮೋನಿಯಂ ಸಂಗೀತದಿಂದ ಪುರಾಣ ಪ್ರವಚನ ಮಂಗಲಗೊಳಿಸುವರು. ಕುಷ್ಟಗಿಯ ಎಸ್.ಎಸ್. ಹಿರೇಮಠ ತಬಲಾ ಸಾಥ್ ನೀಡಲಿದ್ದಾರೆ. ಅಡ್ಡಪಲ್ಲಕ್ಕಿ ಶೃಂಗಾರ ಹಾಗೂ ಸೇವೆಗಳು ಓಣಿಯ ಸದ್ಭಕ್ತರಿಂದ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.



