ವಿಜಯಸಾಕ್ಷಿ ಸುದ್ದಿ, ಗದಗ: ಮನೆ-ಮನಗಳ ಪರಿವರ್ತನೆ ಮತ್ತು ಪರಿಶುದ್ಧತೆಗೆ ಗ್ರಂಥ, ಹಣತೆ ಮತ್ತು ಪೊರಕೆ ಅವಶ್ಯ ಎಂದು ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಶ್ರೀಮದ್ ಕಾಶೀ ನೂತನ ಜಗದ್ಗುರುಗಳವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನದಲ್ಲಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.
ಪ್ರತಿಯೊಬ್ಬರ ಜೀವನದಲ್ಲಿ ಗ್ರಂಥಗಳು ಮಾರ್ಗದರ್ಶಿಗಳಾಗಿವೆ. ಜ್ಞಾನದ ದಿಗಂತವನ್ನು ಹೆಚ್ಚಿಸುವ ಮೂಲಕ ಸನ್ಮಾರ್ಗದಲ್ಲಿ ಮುನ್ನಡೆದು ಜೀವನ್ಮುಕ್ತಿಗೆ ಸಾಧನವಾಗಿವೆ. ಹಣತೆ ಚಿಕ್ಕ ಗುಡಿಸಲಿನಲ್ಲಿಯೂ ತನ್ನದೇ ಆದ ಪ್ರಕಾಶವನ್ನು ಬೀರಿ, ಮನೆ-ಮನದ ಅಂಧಕಾರವನ್ನು ತೊಡೆದು ಹಾಕಿ ಬದುಕಿನ ಬೆಳಕನ್ನು ಅಭಿವ್ಯಕ್ತಿಗೊಳಿಸುವ ಸಂಕೇತವಾಗಿದೆ. ದೀಪಾವಳಿ, ದೀಪಾರಾಧನೆ ಜ್ಞಾನ ಮತ್ತು ಬೆಳಕಿನ ಪ್ರತೀಕವಾಗಿವೆ ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದ ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು, ಸಂಸ್ಕೃತ ಮತ್ತು ಕನ್ನಡ ಭಾಷೆ ಅತ್ಯಂತ ಪ್ರಭಾವಶಾಲಿ ಮತ್ತು ಗಟ್ಟಿತನವುಳ್ಳ ಭಾಷೆಯಾಗಿದೆ ಎಂಬುದನ್ನು ಇದುವರೆಗೆ ಪ್ರಕಟಗೊಂಡಿರುವ ಮಹಾನ್ ಗ್ರಂಥಗಳೇ ಸಾಬೀತುಪಡಿಸಿವೆ ಎಂದರು.
ಸಮಾರಂಭದಲ್ಲಿ ಜೀಗೇರಿ ಮತ್ತು ನರಸಾಪೂರ ಮಠದ ಸ್ವಾಮೀಜಿ ಉಪಸ್ಥಿತರಿದ್ದರು. ಗಣ್ಯರಾದ ಆರ್.ಎ. ರಬ್ಬನಗೌಡ್ರ, ವ್ಹಿ.ಸಿ. ಧನ್ನೂರಹಿರೇಮಠ, ಎಸ್.ಎಚ್. ಶಿವನಗೌಡ್ರ, ಚಂದ್ರು ಹಿರಯಾಳಮಠ, ಜಯದೇವ ಮೆಣಸಗಿ, ಶಂಭು ಪಟ್ಟದಕಲ್ಲ, ರಾಜಶೇಖರ ವಸ್ತçದ, ಡಾ. ಶಿವಾನಂದಯ್ಯ ಹಿರೇಮಠ, ಮೃತ್ಯುಂಜಯ ಸಂಕೇಶ್ವರ, ಕಿರಣ ಭೂಮಾ, ಆರ್.ಕೆ. ಮಠದ, ಬಸವರಾಜ ಗಣಾಚಾರಿ ಅವರನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.
ಸುವರ್ಣಾ ಹೊಸಂಗಡಿ ಪ್ರಾರ್ಥಿಸಿದರು. ಶಿವಾನಂದಯ್ಯ ಹಿರೇಮಠ ಸ್ವಾಗತಿಸಿದರು. ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.