ವಿಜಯಸಾಕ್ಷಿ ಸುದ್ದಿ, ಧಾರವಾಡ: ಪುಟ್ಟರಾಜ ಗವಾಯಿಗಳ ಆಶಯದಂತೆ ಸಂಗೀತ, ಸಾಹಿತ್ಯ ಸೇವೆ ನಿರಂತರವಾಗಿ ನಡೆಸುತ್ತಾ, ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಿಕೊಟ್ಟು, ಅವರ ಕಲಾಪ್ರದರ್ಶನ ಸಾರ್ವತ್ರಿಕಗೊಳಿಸುತ್ತಿರುವ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ನಾಡ ನುಡಿಯ ಸೇವೆ ಅನನ್ಯ. ಸಮಿತಿಯ ಕಾರ್ಯ ಶ್ಲಾಘಿಸುವಂಥದು ಎಂದು ಮನ್ಸೂರಿನ ರೇವಣಸಿದ್ಧೇಶ್ವರ ಮಠದ ಡಾ. ಬಸವರಾಜ ದೇವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮನ್ಸೂರ ಗ್ರಾಮದ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮಠದ ಸಭಾಭವನದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಜಂಟಿಯಾಗಿ ಹಮ್ಮಿಕೊಂಡಿದ್ದ ಕರ್ನಾಟಕ ನಾಮಕರಣ ಸುರ್ವಣ ಮಹೋತ್ಸವ ಸ್ಮರಣೆಯಲ್ಲಿ `ಹೆಸರಾಯಿತು ಕರ್ನಾಟಕ’ ಕವಿಗೋಷ್ಠಿ, ಕಾವ್ಯಗಾಯನ, ನೃತ್ಯ ನಮನ ಮತ್ತು ಸುವರ್ಣಸಿರಿ ಸಮ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹೆಸರಾಯಿತು ಕರ್ನಾಟಕ ಉಪನ್ಯಾಸ ನೀಡಿದ ಸುರೇಶ ಕಡೆಮನಿ, ಕನ್ನಡ ಭಾಷೆಯ ಪ್ರಾಚೀನತೆ, ಕನ್ನಡ ಭಾಷಯ ಇತಿಹಾಸ, ಕರ್ನಾಟಕ ಏಕೀಕರಣದ ಹೋರಾಟದ ದಿನಗಳನ್ನು ಮೆಲುಕು ಹಾಕುತ್ತಾ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು. ಮತ್ತೊಬ್ಬ ಅತಿಥಿ ವಿಭೂತಿ ಪತ್ರಿಕೆ ಸಂಪಾದಕ ಅಂದಾನೆಪ್ಪ ವಿಭೂತಿ ಮಾತನಾಡುತ್ತಾ, ಕರ್ನಾಟಕ ಹೆಸರಾಯಿತು, ಆದರೆ ಕನ್ನಡ ಭಾಷೆ ಕನ್ನಡಿಗರಲ್ಲಿ ಉಸಿರಾಗಿದೆಯೆ? ಆಗಿಲ್ಲ ಎಂದರೆ, ಯಾಕೆ ಆಗಿಲ್ಲ ಎಂದು ಪ್ರಶ್ನಿಸುತ್ತ ಇತ್ತೀಚಿನ ದಿನಗಳಲ್ಲಿ ಕನ್ನಡಿಗರಲ್ಲಿ ಹೆಚ್ಚಾಗಿರುವ ಇಂಗ್ಲಿಷ್ ವ್ಯಾಮೋಹ, ಕನ್ನಡ ಕನಿಷ್ಠ ಎನ್ನುವ ಭ್ರಮೆ ಇದಕ್ಕೆ ಕಾರಣ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾ. ಸಂಗೀತ ವಿಭಾಗದ ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರು, ಡೀನ್ರು ಕಲಾ ನಿಖಾಯದ ಡಾ. ಮೃತ್ಯುಂಜಯ ಅಗಡಿ ತಮ್ಮ ಗಾಯನದ ಮೂಲಕ ಹಿಂದೂಸ್ತಾನಿ ಸಂಗೀತ ದಿಗ್ಗಜ ಪಂಡಿತ ಮಲ್ಲಿಕಾರ್ಜುನ ಮನ್ಸೂರ್ ಮತ್ತು ಪಂ. ಪಂಚಾಕ್ಷರಿ ಮತ್ತಿಗಟ್ಟಿ ಅವರನ್ನು ನೆನಪಿಸಿದರು.
ಪ್ರಾರಂಭದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ, ಕಲಾ ವಿಕಾಸ ಪರಿಷತ್ನ ಅಧ್ಯಕ್ಷ ಸಿ.ಕೆ.ಎಚ್. ಕಡಣಿ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ಸಮಿತಿಯ ಸಾಧನೆಗಳನ್ನು ತಿಳಿಸಿದರು. ಡಾವಣಗೇರಿಯ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಸೌಮ್ಯ ಸತೀಶ್ ಧಾರವಾಡ, ಗಂಗಾಧರ ಎಮ್ಮಿಗನೂರ ಸಾಂದರ್ಭಿಕವಾಗಿ ಮಾತನಾಡಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹೂವಿನಹಡಗಲಿಯ ಎಂಪಿಎಂ ಕೊಟ್ರಯ್ಯನವರು ವಹಿಸಿದ್ದರು. ಡಾ. ಭೀಮಾಶಂಕರ ಎಂ.ಆರ್. ಧಾರವಾಡ ಇವರು ಹೆಸರಾಯಿತು ಕರ್ನಾಟಕ ರಾಜ್ಯಮಟ್ಟದ ಕವಿ ಗೋಷ್ಠಿಯ ಆಶಯ ನುಡಿಗಳನ್ನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿ, ಕವಯಿತ್ರಿಯರು ತಮ್ಮ ಕವನಗಳನ್ನು ವಾಚಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪಂ. ಫಕೀರೇಶ್ವರ ಶಾಸ್ತ್ರಿಗಳು ವಹಿಸಿದ್ದರು. ಬಾಲ ಕಲಾವಿರಾದ ಅಮೂಲ್ಯ ಮತ್ತು ಐಶ್ವರ್ಯ ಸ್ವಾಗತ ನೃತ್ಯ ಮಾಡಿದರು. ವಾರುಣಿ ದೇಶಪಾಂಡೆ ಪ್ರಾರ್ಥನೆ ನಡೆಸಿಕೊಟ್ಟರು. ಶರಣ ಬಡ್ಡಿ ಸಿಗ್ಗಾಂವ ಇವರಿಂದ ಭರತನಾಟ್ಯ ಡಾ. ಶರ್ಮಿಳಾ ಹಾಗೂ ಶಿಷ್ಯವೃಂದ, ಡಾ. ಸುಮಾ ಹಡಪದ ಇವರ ಗಾಯನ ಪ್ರೇಕ್ಷಕರನ್ನು ರಂಜಿಸಿದವು. ಸಂಚಾಲಕರಾಗಿ ಡಾ. ಸುಮಾ ಹಡಪದ ಮತ್ತು ಬಳಗದವರು ಸಮಾರಂಭದ ಯಶಸ್ವಿಗೆ ಕಾರ್ಯ ನಿರ್ವಹಿಸಿದರು. ವೀರೇಶರಡ್ಡಿ ಟಿ.ಕಾಮರಡ್ಡಿ ಸ್ವಾಗತಿಸಿದರು. ಯಮನಪ್ಪ ಜಾಲಗಾರ ಮತ್ತು ಎ.ಬಿ. ರುದ್ರಮ್ಮ ಕಾರ್ಯಕ್ರಮ ನಿರೂಪಣೆ ಮಾಡಿದರು. ದಾನಮ್ಮ ಅಂಗಡಿ ವಂದಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಸ್.ಕೆ. ಮೇಲ್ಮುರಿ, ಕಸ್ತೂರೆಮ್ಮ ಹಿರೇಮಠ, ಎಂಪಿಎಂ ಕೊಟ್ರಯ್ಯ, ಚಂದ್ರಕಲಾ ಜನಗೌಡ, ಡಾ. ಶ್ರೀದೇವಿ ಸುವರ್ಣಖಂಡಿ, ಹೆಚ್.ಆರ್. ಬಾಗವಾನ, ಸೌಮ್ಯಶ್ರೀ ಹಿರೇಮಠ, ಶಶಿಧರ ಸ್ವಾಮಿ ಹಿರೇಮಠ, ಹಾಲಪ್ಪ ಚಿಗಟೇರಿ, ಬಸವರಾಜ ಹಡಪದ ಹಳಿಯಾಳ ಡಾ. ಬಿ.ಎ. ರಾಜಪ್ಪ, ಮಹಾಂತೇಶ ಕುಂಬಾರ, ಅನ್ನಪೂರ್ಣ ಜವಳಿ ಇವರುಗಳಿಗೆ ಸುವರ್ಣ ಕರ್ನಾಟಕ ಸಿರಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.