ವಿಜಯಸಾಕ್ಷಿ ಸುದ್ದಿ, ಮುಳಗುಂದ: ಹೆತ್ತ ತಂದೆ-ತಾಯಿ, ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ಬಸವರಾಜ ಬಡ್ನಿ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರೌಢಶಾಲೆಯ (ಆರ್.ಎಂ.ಎಸ್.ಎ) ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಯಲ್ಲಿ ಸರಕಾರದಿಂದ ಹಲವು ಸೌಲಭ್ಯಗಳು ಸಿಗುತ್ತವೆ. ತಂದೆ-ತಾಯಿಗಳು ಹಾಗೂ ಗುರುಗಳು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ. ಮಕ್ಕಳು ಸತತವಾಗಿ ಅಭ್ಯಾಸದಲ್ಲಿ ತೊಡಗಿಕೊಂಡು ಗ್ರಾಮಕ್ಕೆ, ಕಲಿತ ಶಾಲೆಗೆ ಕೀರ್ತಿ ತರಬೇಕು ಎಂದರು.
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ರತ್ನಾ ಬದಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಕ್ಕಳು ನಮಗೆ ದೇವರಿದ್ದಂತೆ. ಆ ದೇವರುಗಳ ಸೇವೆ ಮಾಡುವ ಗುರುಗಳಾಗುವ ಭಾಗ್ಯ ನಮಗೆಲ್ಲರಿಗೂ ದೊರೆತಿದೆ. ಇಂದು ಆಧುನಿಕ ತಂತ್ರಜ್ಞಾನ ಬೆಳೆದಂತೆ ಮಕ್ಕಳು ಕಲಿಕೆಯಲ್ಲಿ ಮುಂದಿದ್ದಾರೆ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಿ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಮಾಹಾದೇವಪ್ಪ ಮಾನೇಗಾರ, ಮಾಹಾಂತೇಶ ಕೆಂಚನಾಯ್ಕರ, ಶಾಲಾ ಪ್ರಧಾನ ಗುರು ಶರಣು ಪೂಜಾರ, ಎಲ್.ಡಿ. ರಾಠೋಡ, ನೂರಹ್ಮದ ನದಾಫ್, ವಿ.ಟಿ. ಅಂಗಡಿ, ಜಿ.ಆರ್. ಕುಂದರಗಿ. ಗೀತಾ ಪಾಟೀಲ್, ಬಸವರಾಜ ಗೌರಿಮನಿ, ಮಂಜುನಾಥ ಗುಲಗಂಜಿ ಇದ್ದರು.