ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಬಹುತೇಕ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಮಕ್ಕಳಿಗೆ ಸಾಕಷ್ಟು ಸೌಲಭ್ಯಗಳ ಜೊತೆಗೆ ಶಿಕ್ಷಣ ಇಲಾಖೆಯಲ್ಲಿ ಹೆಚ್ಚಿನ ಕಾರ್ಯಕ್ರಮಗಳು ನಡೆಯುತ್ತಿರುವುದು ಮೆಚ್ಚುಗೆಯ ವಿಷಯವಾಗಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ಶ್ರೀ ಸೋಮೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3ರಲ್ಲಿ ಬುಧವಾರ ಲಕ್ಷ್ಮೇಶ್ವರ ದಕ್ಷಿಣ ಕ್ಲಸ್ಟರ್ನ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಗಳ ಬಗ್ಗೆ ಜನರಲ್ಲಿ ಇರುವ ಕೆಟ್ಟ ಅಭಿಪ್ರಾಯಗಳು ಕಡಿಮೆಯಾಗಬೇಕು. ಈ ಹಿನ್ನೆಲೆಯಲ್ಲಿ ಸರಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಮಕ್ಕಳಿಗೆ ಉತ್ತಮ ಶೈಕ್ಷಣಿಕ ಮೌಲ್ಯಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವ ಕಾರ್ಯವು ಸಹ ನಡೆಯುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ. ಪ್ರತಿಭಾ ಕಾರಂಜಿ ಕೂಡ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದರು.
ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಎಸ್ಡಿಎಂಸಿ ಅಧ್ಯಕ್ಷ ಸೋಮಣ್ಣ ಮಾಗಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮನ್ವಯಾಧಿಕಾರಿ ಬಿ.ಎಸ್. ಭಜಂತ್ರಿ, ಬಿಆರ್ಪಿಗಳಾದ ಈಶ್ವರ ಮೆಡ್ಲೇರಿ, ಬಸವರಾಜ ಯರಗುಪ್ಪಿ, ಎಲ್.ಎ. ನಡುವಿನಮನಿ, ಬಿ.ಎಂ. ಕುಂಬಾರ, ನಿರ್ಮಲಾ ಮಾಗಡಿ, ಸರೋಜಾ ಕಳ್ಳಿಮನಿ, ಎಸ್.ಎಚ್. ಪೂಜಾರ, ಎನ್.ಎಸ್. ಬಂಕಾಪೂರ, ಜೆ.ಎಸ್. ಹುಲ್ಲಣ್ಣವರ, ಜೆ.ಎಚ್. ಮಾಣಿಕ, ಎಚ್.ಡಿ. ನಿಂಗರಡ್ಡಿ, ನಾಗರಾಜ ಮಜ್ಜಿಗುಡ್ಡ, ಎಸ್.ಎ. ಮತ್ತೂರ, ಎಲ್.ಆರ್. ಮಲ್ಲಸಮುದ್ರ ಮುಂತಾದವರಿದ್ದರು.
ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 14 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಜೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು. ಪ್ರಾಸ್ತಾವಿಕವಾಗಿ ಸಿಆರ್ಪಿ ಸತೀಶ ಬೋಮಲೆ ಮಾತನಾಡಿದರು. ಎಮ್.ಎಮ್. ಕಳಸೂರ ಸ್ವಾಗತಿಸಿದರು. ಉಮೇಶ ನೇಕಾರ ನಿರೂಪಿಸಿದರು. ರಮೇಶ ಮಾಂಡ್ರೆ ವಂದಿಸಿದರು.