ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದಲ್ಲಿ ಇತ್ತೀಚೆಗೆ ಬೈಕ್ ಕಳ್ಳತನದ ಪ್ರಕರಣಗಳು ಮಿತಿಮೀರಿದ್ದವು. ಇಂತಹ ಘಟನೆಗಳ ಬೆನ್ನು ಬಿದ್ದ ರೋಣ ಪೊಲೀಸರು ಶೀಘ್ರವೇ ಕಾರ್ಯಪ್ರವೃತ್ತರಾಗಿ ಕಳುವಾಗಿದ್ದ ಬೈಕ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗಷ್ಟೇ ರೋಣ ಬಸ್ ನಿಲ್ದಾಣದಲ್ಲಿ ಗೌಸುಸಾಬ ದೊಡ್ಡಮನಿ ಎಂಬುವರ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ಗೌಸುಸಾಬರು ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರಲ್ಲದೆ, ಬಂಧಿತ ಆರೋಪಿಯಿಂದ ಮತ್ತಷ್ಟು ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು 17 ಲಕ್ಷ ರೂ ಮೌಲ್ಯದ ಒಟ್ಟೂ 32 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ರೋಣ ಪೊಲೀಸ್ ಠಾಣೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸುದ್ದಿಗೋಷ್ಠಿ ನಡೆಸಿ, ರೋಣ ಪೊಲೀಸರ ಕರ್ತವ್ಯ ನಿಷ್ಠೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಅಲ್ಲದೆ ಬಂಧಿತ ಆರೋಪಿ ಈಶ್ವರಪ್ಪ ತಳಮಗೇರಿ ರೋಣ ತಾಲೂಕಿನ ಗುಜಮಾಗಡಿ ಗ್ರಾಮದವನಾಗಿದ್ದು, ಈತ ಗದಗ ಜಿಲ್ಲೆ ಸೇರಿದಂತೆ ಕೊಪ್ಪಳ, ಬೆಳಗಾವಿ, ಬಾಗಲಕೊಟ ಜಿಲ್ಲೆಗಳಲ್ಲಿ ಒಟ್ಟು 32 ಬೈಕ್ಗಳನ್ನು ಕದ್ದು ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡಿದ್ದಾನೆ.
ಇದನ್ನೆಲ್ಲ ಪತ್ತೆ ಹಚ್ಚುವಲ್ಲಿ ರೋಣ ಪೊಲೀಸರು ಯಶಸ್ವಿಯಾಗಿದ್ದು, ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳಿಗೆ ಪ್ರಂಶಸಾ ಪತ್ರದೊಂದಿಗೆ ಬಹುಮಾನವನ್ನು ನೀಡಲಾಗುವುದು ಎಂದರು.
ಕಾರ್ಯಾಚರಣೆಯಲ್ಲಿ ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್ಐ ಪ್ರಕಾಶ ಬಣಕಾರ, ಕ್ರೈಂ ಪಿಎಸ್ಐ ಚವಡಿ, ಎಚ್.ಎಸ್. ಶಂಕ್ರಿ, ಕೆ.ಕೆ. ಬಳಿಗೇರ, ಮಂಜುನಾಥ ಕುರಿ, ಮುತ್ತಪ್ಪ ಭಾವಿ, ಗುರುರಾಜ ಬೂದಿಹಾಳ, ಸಂಜೀವ ಕೊರಡೂರ, ಕುಮಾರ ಸೇರಿದಂತೆ ಮುಂತಾದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್ಐ ಪ್ರಕಾಶ ಬಣಕಾರ, ಪಿಎಸ್ಐ ಐಶ್ವರ್ಯ ನಾಗರಾಳ, ಪಿಎಸ್ಐ ಪ್ರಭುಗೌಡ ಗೌಡರ, ಎಸ್ಐ ಸರ್ವಿ ಸೇರಿದಂತೆ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.