ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗಂಗಾಪುರ ಪೇಟೆಯಲ್ಲಿರುವ ಗದಗ ಹಾಗೂ ಹೊಂಬಳ ಸಂಪರ್ಕ ಕಲ್ಪಿಸುವ, ನಿರ್ಮಾಣ ಹಂತದಲ್ಲಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಐದಾರು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಗದಗ ನಗರದ ಗಂಗಾಪುರ ಪೇಟೆಯಲ್ಲಿರುವ ಗದಗ-ಹೊಂಬಳ ಸಂಪರ್ಕ ಕಲ್ಪಿಸುವ ನಿರ್ಮಾಣ ಹಂತದಲ್ಲಿರುವ ರೇಲ್ವೆ ಸೇತುವೆ ಕಾಮಗಾರಿಯ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಹೊಂಬಳ ಗ್ರಾಮೀಣ ಪ್ರದೇಶದಿಂದ ಅಂಬೇಡ್ಕರ್ ನಗರದ ಮೂಲಕ ಹಾದುಹೋಗುವ ರೇಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಲಾಗಿದೆ. ಬಹಳ ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಮೂರು ತಿಂಗಳ ಹಿಂದೆ ಈ ಕಾಮಗಾರಿಯ ಕುರಿತು ಹುಬ್ಬಳಿಯ ನೈರುತ್ಯ ರೇಲ್ವೆ ವಲಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದಾಗ ಕೂಡಲೆ ಕಾಮಗಾರಿ ಪ್ರಾರಂಭ ಮಾಡುವುದಾಗಿ ತಿಳಿಸಿದ್ದರು. ಅದೇ ರೀತಿ ಕ್ರಮ ಕೈಗೊಂಡಿದ್ದಾರೆ. ಹೊಸ ಗುತ್ತಿಗೆದಾರರನ್ನು ನೇಮಿಸಿದ್ದು, ಕಾಮಗಾರಿ ಪ್ರಾರಂಭವಾಗಿದೆ ಎಂದರು.
ಇಲ್ಲಿ ಎರಡು-ಮೂರು ಕಾಮಗಾರಿಗಳ ಕುರಿತು ಚರ್ಚೆ ಮಾಡಿದ್ದೇವೆ. ಅಂಬೇಡ್ಕರ್ ನಗರದಲ್ಲಿನ ೮೦ ಮೀಟರ್ ಕುಡಿಯುವ ನೀರಿನ ಪೈಪ್ಲೈನ್ ಬದಲಾವಣೆ ಮಾಡಬೇಕಿತ್ತು. ಅಂಬೇಡ್ಕರ್ ನಗರದ ನಿವಾಸಿಗಳು ಒಳ ಚರಂಡಿ ವ್ಯವಸ್ಥೆ ಸುಧಾರಣೆ ಸೇರಿದಂತೆ ಕೆಲವು ಬೇಡಿಕೆ ಇಟ್ಟಿದ್ದಾರೆ. ಅಂಬೇಡ್ಕರ್ ನಗರ ಬಡವರು ವಾಸಿಸುವ ಪ್ರದೇಶವಾಗಿದ್ದು, ಈ ಕುರಿತು ಈ ಪ್ರದೇಶದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಹಾಯಕ ಆಯುಕ್ತ ಗಂಗಪ್ಪ ಅವರೊಂದಿಗೆ ಮಾತನಾಡಿದ್ದೇನೆ. ಅವರು ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗನೆ ಹೊಂಬಳ ಮತ್ತು ಅಂಬೇಡ್ಕರ್ ನಗರದ ಕಡೆಗಿನ ಎರಡೂ ಕಾಮಗಾರಿಗಳು ಏಕಕಾಲಕ್ಕೆ ಆರಂಭವಾಗಲಿವೆ ಎಂದರು.
ಈ ಸಂಧರ್ಭದಲ್ಲಿ ರೇಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಇದರ ನಡುವೆ ರೇಲ್ವೆ ಹಳಿ ಮೇಲೆ ೪೨ ಮೀಟರ್ನ ಸ್ಟೀಲ್ ಬ್ರಿಡ್ಜ್ ಬರಲಿದೆ. ಮುಂದಿನ ಹದಿನೈದು ದಿನಗಳಲ್ಲಿ ಅದನ್ನು ಜೋಡಿಸಲಾಗುತ್ತದೆ. ಐದಾರು ತಿಂಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳು ಆಸಕ್ತಿ ತೆಗೆದುಕೊಂಡಿದ್ದಾರೆ. ನಾನೂ ಮೇಲಿಂದ ಮೇಲೆ ಯೋಜನೆಯ ಪ್ರಗತಿ ಪರಿಶೀಲನೆ ಮಾಡುತ್ತೇನೆ. ಈ ವಿಚಾರವಾಗಿ ರೇಲ್ವೆ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.