ವಿಜಯಸಾಕ್ಷಿ ಸುದ್ದಿ, ಗದಗ : ಹುಬ್ಬಳ್ಳಿ ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಚಿವ ಎಂ.ಬಿ. ಪಾಟೀಲ ಅವರು ಸಭೆ ನಡೆಸಿ, ಸಮಯದ ಅಭಾವದ ಬಗ್ಗೆ ಚರ್ಚಿಸಿ ವಿಜಯಪುರ ರೈಲನ್ನು ಗದಗ ಬೈಪಾಸ್ ಸ್ಟೇಷನ್ ಮುಖಾಂತರ ಚಲಿಸುವಂತೆ ಆತುರದ ನಿರ್ಧಾರ ಕೈಗೊಂಡಿರುವುದು ವಿಪರ್ಯಾಸವಾಗಿದೆ ಎಂದು ಗದಗ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಎಚ್.ಕೊಪ್ಪಳ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರಣ ಗದಗ ಬೈಪಾಸ್ ಊರಿನ ಆಚೆ ಇರುವ ನಿಲ್ದಾಣವಾಗಿದ್ದು, ಅಕ್ಕಪಕ್ಕದಲ್ಲಿ ಯಾವುದೇ ಮನೆ ಮತ್ತು ವಾಣಿಜ್ಯ ಮಳಿಗೆ ಹಾಗೂ ಸಮರ್ಪಕವಾದ ರಸ್ತೆ ಇಲ್ಲ. ಜನಸಾಮಾನ್ಯರು ಈ ನಿಲ್ದಾಣಕ್ಕೆ ಅಟೋ ಮೂಲಕ ರೂ. ೧೫೦-೨೦೦ ಕೊಟ್ಟು ಹೋಗಬೇಕು. ಇದು ಸಾಮಾನ್ಯ ಜನತೆಗೆ ಹೊರೆಯಾಗಲಿದೆ.
ಸಂಬಂಧಿಸಿದ ರೈಲ್ವೆ ಇಲಾಖೆಯವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ ಸದರಿ ನಿಲ್ದಾಣಕ್ಕೆ ಸಾರ್ವಜನಿಕರಿಗೆ ಹೋಗಲು ಅಚ್ಚುಕಟ್ಟಾದ ರಸ್ತೆ ವ್ಯವಸ್ಥೆಯನ್ನು ಮಾಡಿ, ನಂತರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ರೈಲು ಪ್ರಯಾಣ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.