ಬೆಂಗಳೂರಿನಲ್ಲಿ ಮಳೆ ಅವಾಂತರ: ಸಿಟಿ ಮಂದಿ ತತ್ತರ, ಹಲವೆಡೆ ನಾನಾ ಅವಾಂತರ!

0
Spread the love

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ತತ್ತರಿಸಿದ್ದು, ಹಲವೆಡೆ ನಾನಾ ಅವಾಂತರ ಸೃಷ್ಟಿ ಆಗಿದೆ.

Advertisement

ಬಿನ್ನಿಪೇಟೆ, ಯಲಹಂಕದಲ್ಲಿ ಅಪಾರ್ಟ್​ಮೆಂಟ್​​ಗಳ ಕಾಂಪೌಂಡ್ ಕುಸಿದು ಅಪಾರ್ಟ್​ಮೆಂಟ್​​ಗಳ ಆವರಣಕ್ಕೆ ನೀರು ನುಗ್ಗಿ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ.

ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಮಳೆಗೆ ಪಾರ್ಕ್​ವೆಸ್ಟ್ ಅಪಾರ್ಟ್ಮೆಂಟ್ ಹಿಂಭಾಗ ಕಾಂಪೌಂಡ್ ಗೋಡೆ ಕುಸಿದಿದೆ. 10 ಅಡಿ ಎತ್ತರದ ಗೋಡೆ ರಸ್ತೆಗೆ ಉರುಳಿ ಅವಾಂತರ ಸೃಷ್ಟಿಯಾಗಿದೆ. ಗೋಡೆ ಕುಸಿದಿದ್ದರಿಂದ 10ಕ್ಕೂ ಹೆಚ್ಚು ಬೈಕ್​ಗಳು ಜಖಂ ಆಗಿದ್ದು ವಿದ್ಯುತ್​ ಕಂಬದ ಮೇಲೆ ಗೋಡೆ ಬಿದ್ದ ಹಿನ್ನೆಲೆ ಕಂಬ ವಾಲಿದೆ. ಮನೆಯಿಂದ ಹೊರಬರಲಾಗದೇ ಸ್ಥಳೀಯರು ಪರದಾಡುತ್ತಿದ್ದಾರೆ.

ಬೆಂಗಳೂರಿನ ಹಲವೆಡೆ 10ಕ್ಕೂ ಅಧಿಕ ಮರಗಳು ಧರಾಶಾಹಿ. ಬೆಂಗಳೂರು ದಕ್ಷಿಣ ವಲಯದಲ್ಲಿ ಮರಗಳು ಬಿದ್ದು ಕಾರು, ಆಟೋ, ಬೈಕ್​ಗಳು ಜಖಂ ಆಗಿವೆ. ಮಲ್ಲೇಶ್ವರಂ 17ನೇ ಕ್ರಾಸ್​ನಲ್ಲಿ ಕ್ಲೌಡ್​ ನೈನ್​​ ಆಸ್ಪತ್ರೆ ಮುಂಭಾಗದಲ್ಲಿ ಬೃಹತ್ ಮರ ಧರೆಗುರುಳಿದೆ. ರಾತ್ರಿಯಾಗಿದ್ದರಿಂದ ಅದೃಷ್ಟವಶಾತ್​​ ಭಾರಿ ಅನಾಹುತ ತಪ್ಪಿದೆ. ಬಿಬಿಎಂಪಿ ಸಿಬ್ಬಂದಿಯಿಂದ ಮರಗಳ ತೆರವು ಕಾರ್ಯ ಮುಂದುವರೆದಿದೆ.

ರಾತ್ರಿ ಸುರಿದ ಮಳೆಯಿಂದ ಜಯನಗರ 4th ಬ್ಲಾಕ್ ನಲ್ಲಿ ಮರದ ಕೊಂಬೆಗಳು ಧರೆಗುರುಳಿವೆ. ಇತ್ತ ಮೊನ್ನೆ ಮೊನ್ನೆಯಷ್ಟೇ ಇದೇ ಏರಿಯಾದಲ್ಲಿ ಮರ ತೆರವು ಕಾರ್ಯಾಚರಣೆ ನಡೆಸಿದ್ದ ಪಾಲಿಕೆ ಎಷ್ಟರಮಟ್ಟಿಗೆ ಒಣಗಿದ್ದ ಮರಗಳನ್ನ ತೆರವು ಮಾಡಿತ್ತು ಅನ್ನೋ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ಸರ್ಜಾಪುರ ಮುಖ್ಯರಸ್ತೆಯಲ್ಲಿ ಕಳೆದ ನಾಲ್ಕು ದಿನಗಳಿಂದ ರಸ್ತೆಯಲ್ಲಿ ನೀರು ನಿಂತಿದ್ದು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರೈಲ್ವೇ ಟ್ರ್ಯಾಕ್ ಗೆ ನೀರು ಬರುತ್ತೆ ಅಂತಾ ರೈಲ್ವೇ ಇಲಾಖೆ ನೀರು ಹರಿಯೋ ಜಾಗವನ್ನ ಮುಚ್ಚಿರೋದು ಇಡೀ ರಸ್ತೆ ಜಲಾವೃತವಾಗುವಂತೆ ಮಾಡಿದೆ.

ಇತ್ತ ನೀರು ತುಂಬಿದ ರಸ್ತೆಯಲ್ಲೇ ವಾಹನ ಸವಾರರು ಸರ್ಕಸ್ ಮಾಡಿಕೊಂಡು ಸಂಚಾರ ಮಾಡ್ತಿದ್ದು, ಪ್ರತಿಬಾರೀ ಮಳೆ ಬಂದಾಗಲೂ ಇದೇ ಸ್ಥಿತಿ ಎದುರಾಗ್ತಿರೋದಕ್ಕೆ ಸ್ಥಳೀಯರು ಕಂಗಾಲಾಗಿಬಿಟ್ಟಿದ್ದಾರೆ. ಮಕ್ಕಳನ್ನ ಶಾಲೆಗೆ ಕಳಿಸೋಕು ಆಗ್ತಿಲ್ಲ ಅಂತಾ ಅಳಲು ತೋಡಿಕೊಂಡಿದ್ದಾರೆ.

ರಸ್ತೆಯಲ್ಲಿ ನೀರು ತುಂಬಿರೋದರಿಂದ ಒಂದೆಡೆ ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ರೆ, ಇತ್ತ ದ್ವಿಚಕ್ರವಾಹನಗಳ ಸೈಲೆನ್ಸರ್ ಗೆ ನೀರು ನುಗ್ಗಿ ಪರದಾಡೋ ದೃಶ್ಯಗಳು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಸದ್ಯ ಈ ರಸ್ತೆಯ ಅರ್ಧಭಾಗ ಬಿಬಿಎಂಪಿಗೆ ಹಾಗೂ ಇನ್ನರ್ಧ ಭಾಗ ಗ್ರಾಮಪಂಚಾಯಿತಿಗೆ ಸೇರೋದರಿಂದ ಇಬ್ಬರ ಸಮನ್ವಯತೆಯಿಂದ ಸಂಕಷ್ಟ ಎದುರಾಗಿದೆ ಅಂತಾ ಸ್ಥಳೀಯರು ಆರೋಪಿಸ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here