ಬೆಂಗಳೂರು:- ಇಷ್ಟು ದಿನ ಸೈಲೆಂಟಾಗೇ ಇದ್ದ ವರುಣ ಇದೀಗ ಮತ್ತೆ ಅಬ್ಬರಿಸಲು ಶುರುಮಾಡಿದ್ದಾನೆ. ಕರ್ನಾಟಕದಲ್ಲಿ ಮುಂಗಾರು ಆರ್ಭಟ ಜೋರಾಗಿದ್ದು, ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ವರುಣನ ಅಬ್ಬರದಿಂದ ಕೆಲವು ಕಡೆಗಳಲ್ಲಿ ಅನಾಹುತ ಸೃಷ್ಟಿಯಾಗಿದೆ.
ಬೆಂಗಳೂರು ಸೇರಿದಂತೆ ಚಾಮರಾಜನಗರ, ಮಂಡ್ಯ, ಹಾಸನ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹನೂರು ಸೇರಿದಂತೆ ಎಲ್ಲೆಡೆ ಭಾರಿ ಮಳೆಯಾಗಿದ್ದು, ಬಿಳಿಗಿರಿರಂಗನ ಬೆಟ್ಟದಲ್ಲಿ ಸುಂದರ ಲೋಕ ಸೃಷ್ಟಿಯಾಗಿದೆ. ಮಂಡ್ಯ ನಗರದ ಬಿಎಸ್ಎನ್ಎಲ್ ಕಚೇರಿ ಬಳಿ ರಸ್ತೆಯಲ್ಲಿ ಹೆಚ್ಚು ನೀರು ನಿಂತ ಹಿನ್ನೆಲೆ ಚರಂಡಿಗೆ ಕಾರು ಉರುಳಿ ಬಿದ್ದಿದೆ. ಹಾಸನ ಜಿಲ್ಲೆಯ ಬೇಲೂರು, ಹೊಳೆನರಸೀಪುರ, ಸಕಲೇಶಪುರ, ಆಲೂರು ತಾಲೂಕಿನ ಹಲವೆಡೆ ಮಳೆಯಾಗಿದೆ.
ಇನ್ನೂ ಕೊಪ್ಪಳ ಜಿಲ್ಲೆಯ ಕೆಲವೆಡೆ ಜಿಟಿಜಿಟಿ ಮಳೆಯಾಗಿದೆ. ರಾಯಚೂರಿನ ಲಿಂಗಸುಗೂರಿನಲ್ಲಿ 101 ಬಾಗಿಲುಗಳುಳ್ಳ 160 ವರ್ಷದ ಐತಿಹಾಸಿಕ ಕಟ್ಟಡ ಭಾಗಶಃ ಕುಸಿದು ಬಿದ್ದಿದೆ. ಜೋರು ಮಳೆಗೆ ಜಿಲ್ಲೆಯ ಮಸ್ಕಿ ತಾಲೂಕಿನ ವೆಂಕಟಾಪುರ ಗ್ರಾಮದ ಮುಖ್ಯ ರಸ್ತೆ ಕುಸಿದಿದ್ದು, ಜೀವ ಭಯದಲ್ಲೇ ಪ್ರಯಾಣಿಕರು ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರೀ ಮಳೆಗೆ ರೈಲ್ವೇ ಸೇತುವೆ ಬಳಿಯೇ ಭೂಕುಸಿತ:-
ಉಡುಪಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಅವಾಂತರಗಳನ್ನು ಸೃಷ್ಟಿಸಿಬಿಟ್ಟಿದೆ. ಮೂಡು ಪೆರಂಪಳ್ಳಿ ಸಮೀಪ ನೂರಾರು ಮೀಟರ್ ಉದ್ದ ಭೂಮಿ ಕುಸಿತವಾಗಿದೆ. ಮೂರ್ನಾಲ್ಕು ಮೀಟರ್ ಭೂಮಿ ನದಿಯ ಭಾಗಕ್ಕೆ ಜಗ್ಗಿದೆ. 15 ದಿನಗಳ ಹಿಂದೆ ಬಿದ್ದ ಮಳೆಗೆ ಭೂಮಿ ಬಿರುಕಾಗಿದೆ. ಸಾಲು ಸಾಲು ತೆಂಗಿನ ಮರಗಳು ಬುಡ ಕಿತ್ತುಕೊಂಡು ನದಿಯತ್ತ ವಾಲಿದೆ. ಇದರಿಂದ ಕೊಂಕಣ ರೈಲ್ವೆಯ ಸೇತುವೆ ಪಕ್ಕದಲ್ಲಿ ಇರುವುದರಿಂದ ಅನಾಹುತ ಆಗುವ ಆತಂಕವಿದೆ.
101 ಬಾಗಿಲುಗಳುಳ್ಳ 160 ವರ್ಷಗಳ ಕಟ್ಟಡ ಕುಸಿತ:
ಧಾರಾಕಾರ ಮಳೆಗೆ ಜಿಲ್ಲೆಯ ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿದ್ದು, ಲಿಂಗಸುಗೂರು ಪಟ್ಟಣದ 101 ಬಾಗಿಲುಗಳುಳ್ಳ 160 ವರ್ಷದ ಐತಿಹಾಸಿಕ ಕಟ್ಟಡ ಭಾಗಶಃ ಕುಸಿದಿದೆ. ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿದ್ದ ಅಪರೂಪದ ವಿಶಿಷ್ಟ ಬಂಗಲೆ `ನೂರೊಂದು ಬಾಗಿಲಿನ ಬಂಗಲೆ’ ಎಂದೇ ಪ್ರಸಿದ್ಧಿ ಪಡೆದಿದೆ. ಈಗಲೂ ಸರ್ಕಾರಿ ವಿವಿಧ ಇಲಾಖೆ ಕಚೇರಿಗಳು ಇದೇ ಕಟ್ಟಡದಲ್ಲಿ ನಡೆಯುತ್ತಿವೆ. ಸಹಾಯಕ ಆಯುಕ್ತರ ಕಚೇರಿ ಬಲಭಾಗದ ಕೊಠಡಿ ಮೇಲ್ಛಾವಣಿ ಶಿಥಿಲಾವಸ್ಥೆಗೆ ತಲುಪಿ ಕುಸಿದು ಬಿದ್ದಿದೆ.