ಬಳ್ಳಾರಿ:– ನಗರದಲ್ಲಿ ಸುರಿದ ಭಾರೀ ಮಳೆಯಿಂದ ಅವಾಂತರ ಸೃಷ್ಟಿ ಆಗಿದೆ. ಬಳ್ಳಾರಿಯ ಹಲವೆಡೆ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ನಗರದ ಹೊಸಪೇಟೆ ಹಾಗೂ ಸಿರಗುಪ್ಪ ರಸ್ತೆಯಲ್ಲಿ ಮರಗಳು ಬಿದ್ದಿದ್ದರೆ ಬೆಂಗಳೂರು ರಸ್ತೆಯಲ್ಲಿ ಹತ್ತಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಸ್ತೆಗೆ ಅಡ್ಡಲಾಗಿ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ಸಂಪೂರ್ಣ ಅಸ್ತವ್ಯಸ್ತ ಆಗಿತ್ತು. ಬಳಿಕ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇನ್ನೂ ಗಣಿನಾಡು ಬಳ್ಳಾರಿ ನಗರದಲ್ಲಿ ಇಂದು ಮಧ್ಯಾಹ್ನ ಬಿರುಗಾಳಿ ಸಮೇತ ಜೋರಾಗಿ ಮಳೆ ಸುರಿದಿದ್ದು, ಕಳೆದ ಕೆಲ ದಿನಗಳಿಂದ ಬಿಸಿಲಿನ ಝಳಕ್ಕೆ ಬಸವಳಿದಿದ್ದ ನಗರಕ್ಕೆ ಕೊಂಚ ಮಟ್ಟಿಗೆ ತಂಪೆರೆದಿದೆ. ಕಳೆದ ಹಲವು ದಿನಗಳಿಂದ ಬಳ್ಳಾರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಜೊತೆಗೆ ಬಿಸಿಲಿನ ಝಳವೂ ಜಾಸ್ತಿಯೇ ಇದ್ದು, ರಾತ್ರಿಯಾದರೂ ಶೆಕೆ ಕಡಿಮೆಯಾಗದೆ ನಗರದ ಜನರು ಶೆಕೆಗೆ ಸುಸ್ತಾಗಿದ್ದರು
ಇಂದು ಬೆಳಗ್ಗೆಯಿಂದ ಬಿಸಿಲಿನ ತಾಪಮಾನ ಜಾಸ್ತಿಯಿದ್ದು, ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಮಧ್ಯಾಹ್ನ 3.45 ಗಂಟೆಗೆ ಬಿರುಗಾಳಿ, ಗುಡುಗು ಸಹಿತ ಮಳೆ ಸುರಿದು, ಬಿಸಿಲಿಗೆ ಕಾದು ಕೆಂಡವಾಗಿದ್ದ ನಗರವನ್ನು ತಂಪಾಗಿಸಿತು.