ಗದಗ:- ನಗರದಲ್ಲಿ ಸುರಿದ ಭಾರೀ ಮಳೆಯಿಂದ ಸಾಕಷ್ಟು ಅನಾಹುತ ಸಂಭವಿಸಿದೆ. ಭಾರೀ ಗಾಳೆ-ಮಳೆಗೆ ಗದಗನ ಬೆಟಗೇರಿಯ ತರಕಾರಿ ಮಾರುಕಟ್ಟೆ ಪಿಲ್ಲರ್, ಗೋಡೆ ಕುಸಿತಗೊಂಡಿದೆ.
ಮಾರುಕಟ್ಟೆಯಲ್ಲಿ ಅಳವಡಿಸಿರುವ ಬೃಹತ್ ಛಾವಣಿ ಇದಾಗಿದ್ದು, ಭಾರೀ ಗಾಳಿ ಹಾಗೂ ಮಳೆಗೆ ಬೃಹತ್ ತಗಡಿನ ಶೆಡ್ ವಾಲಿದೆ. ಕಟ್ಟಡ ಸ್ಟ್ರಕ್ಚರ್ ವಾಲಿದ್ದಕ್ಕೆ ಸ್ಥಳೀಯರು ಗಾಬರಿಗೊಂಡಿದ್ದಾರೆ. 2017-18 ರಲ್ಲಿ ಗದಗ ಬೆಟಗೇರಿ ನಗರಸಭೆ ಅನುದಾನದಲ್ಲಿ ಸುಮಾರು 70 ಲಕ್ಷದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗಿತ್ತು.
ಇನ್ನೂ ಕಳಪೆ ಕಾಮಗಾರಿಯಿಂದಾಗಿ ಕಟ್ಟಡ ವಾಲಿರುವ ಬಗ್ಗೆ ಸ್ಥಳೀಯರು ಆರೋಪ ಮಾಡಿದ್ದಾರೆ. ಇನ್ನೂ ಘಟನೆಯಿಂದ ತರಕಾರಿ ಮಾರುಕಟ್ಟೆಯಿಂದ ವ್ಯಾಪಾರಿಗಳನ್ನು ತೆರವು ಮಾಡಲಾಗಿದೆ. ಸ್ಥಳಕ್ಕೆ ನಗರಸಭೆ ಆಯುಕ್ತ ರಾಜಾರಾಮ್, ಎಸ್ ಪಿ ಬಿಎಸ್ ನೇಮಗೌಡ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕಟ್ಟಡ ತೆರವು ಮಾಡಿ, ಪುನಃ ನಿರ್ಮಾಣ ಮಾಡಲು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ಇನ್ನೂ ಮತ್ತೊಂದೆಡೆ ಶನಿವಾರ ಸುರಿದ ಭಾರೀ ಮಳೆಗೆ ಜಿಲ್ಲೆಯ ಎರೆಬೇಲೆರಿ ಗ್ರಾಮದಲ್ಲಿ ಅಪಾರ ಹಾನಿಯಾಗಿದೆ. ಶಾಲೆಯ ಮೇಲಿನ ತಗಡುಗಳು ಸೇರಿ ಮನೆ ಮೇಲಿನ ತಗಡುಗಳು ಬಿರುಗಾಳಿಗೆ ಹಾರಿಹೋಗಿದೆ. ಅಲ್ಲದೇ ಹಲವಾರು ವಿದ್ಯುತ್ ಕಂಬ ಬಿದ್ದಿವೆ ಮತ್ತು ಸಾಕಷ್ಟು ಗಿಡಗಳು-ಮರಗಳು ಬಿದ್ದು, ಅನಾಹುತ ಸೃಷ್ಟಿಯಾಗಿದೆ.
ಸಿಡಿಲಿಗೆ 4 ಕುರಿ, 6 ಆಡು ಬಲಿ- ಕುರಿಗಾಹಿ ಕಣ್ಣೀರು!
ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಗುಡುಗು ಸಹಿತ ಮಳೆಯಾಗಿದ್ದು, ಇಟಗಿ ಗ್ರಾಮದ ಶೇಖವ್ವ ತಿಮ್ಮಪ್ಪ ಪಲ್ಲೇದ್ ಇವರಿಗೆ ಸೇರಿದ 4 ಕುರಿ, 8 ಆಡುಗಳು ಸಿಡಿಲಿಗೆ ಬಲಿಯಾಗಿವೆ. ಘಟನೆಯಿಂದ ಮೂರು ಕುರಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ಕಣ್ಣೀರು ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.