ಬೆಂಗಳೂರು:- ಕಳೆದ ಎರಡ್ಮೂರು ದಿನಗಳಿಂದ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಇಂದು ಕೂಡ ರಾಜ್ಯದ ಹಲವೆಡೆ ಮಳೆಯ ಆರ್ಭಟ ಮುಂದುವರಿದಿದೆ. ಕೆಲವೊಂದು ಜಿಲ್ಲೆಗಳಲ್ಲಿ ಸಾಕಷ್ಟು ಅವಘಡ ಸಂಭವಿಸಿದೆ.
ಕಾರವಾರದಲ್ಲಿ ಭಯಂಕರ ಮಳೆ:
ಕಾರವಾರದಲ್ಲಿ ಮಳೆ ಮುಂದುವರಿದಿದ್ದು, ನಗರದ ಗ್ರೀನ್ ಸ್ಟ್ರೀಟ್ ರಸ್ತೆ ಜಲಾವೃತಗೊಂಡಿದೆ. ರಸ್ತೆಯೇ ಮೇಲೆ ಮಳೆಯ ನೀರು ಹರಿಯುತ್ತಿದೆ. ನಗರದ ಹಬ್ಬುವಾಡ ರಸ್ತೆ, ಕೋಡಿಭಾಗ ರಸ್ತೆ, ಕೆಇಬಿ ರಸ್ತೆಯ ಕೆಲವೆಡೆ ಜಲಾವೃತಗೊಂಡಿವೆ. ಹಲವೆಡೆ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ನೀರಲ್ಲಿ ಕೊಚ್ಚಿ ಹೋದ ಚಾಲಕ:
ಧಾರಾಕಾರ ಮಳೆಗೆ ಆಟೋಚಾಲಕನೊಬ್ಬ ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಚಿಕ್ಕಬೂದನೂರ ಗ್ರಾಮದಲ್ಲಿ ನಡೆದಿದೆ. ಮಳೆರಾಯನ ಅರ್ಭಟದಿಂದ ರಾತ್ರಿ 8 ಗಂಟೆ ಸುಮಾರಿಗೆ ಚಿಕ್ಕಬೂದನೂರ ಗ್ರಾಮದ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಆಟೋ ಚಾಲಕ ನೀರಿನಲ್ಲಿ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿಕ್ಕೊಂಡು ಹೋಗಿದ್ದಾನೆ. ಆಟೋದಲ್ಲಿ ಪ್ರಯಾಣಿಕರಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಧಾರಾಕಾರ ಮಳೆ:
ಬೆಳಗಾವಿಯಲ್ಲಿ ಧಾರಾಕಾರ ಮಳೆಗೆ ಬೆಳಗಾವಿ ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯ ಬೈಲಹೊಂಗಲ, ಗೋಕಾಕ, ಖಾನಾಪುರ ಪಟ್ಟಣದಲ್ಲಿ ಭಾರೀ ಮಳೆ ಸುರಿದಿದೆ. ಬೈಲಹೊಂಗಲ ಪಟ್ಟಣದಲ್ಲಿರುವ ಕ್ಲಿನಿಕ್ ಒಳಗೆ ಮಳೆ ನೀರು ನುಗ್ಗಿದೆ.
ಒಟ್ಟಾರೆ ಕರ್ನಾಟಕದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.