ಮಳೆರಾಯನ ಅರ್ಭಟ: ನಲುಗಿದ ಜನತೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣ ಸೇರಿ ತಾಲೂಕಿನ ಬಹುತೇಕ ಕಡೆ ಬುಧವಾರ ಸಂಜೆ ಮತ್ತು ರಾತ್ರಿ ಸುರಿದ ಅಬ್ಬರದ ಗಾಳಿ-ಮಳೆ ಅನೇಕ ಆವಾಂತರಗಳನ್ನು ಸೃಷ್ಟಿಸಿದೆ. ಪಟ್ಟಣದ ಕೆಲವೆಡೆ ರಾತ್ರಿಯಿಡೀ ಜಾಗರಣೆ ಮಾಡುವಂತಾಗಿತ್ತು. ಹಳ್ಳ-ಕೊಳ್ಳಗಳು ತುಂಬಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಸಿದೆ.

Advertisement

ಪಟ್ಟಣದಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆಯೇ ಹರಿದು ಅನೇಕ ಕಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಟ್ಟಿದ್ದ ಚರಂಡಿ, ನಾಲಾವನ್ನು ಮಳೆಯಲ್ಲಿಯೇ ಪುರಸಭೆ ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು. ಬುಧವಾರ ಸಂಜೆ 7.30ರ ನಂತರ ಅಬ್ಬರಿಸಿದ್ದು, ಅಲ್ಲಿಂದ ಮಧ್ಯರಾತ್ರಿ ಸುಮಾರು 1 ಗಂಟೆಯವರೆಗೂ ಸುರಿದ ಭಾರೀ ಮಳೆಗೆ ಪಟ್ಟಣದ ಪ್ರಮುಖ ರಸ್ತೆಗಳು ಜಲಾವೃತವಾಗಿ ಕೆರೆಯಂತೆ ರೂಪುಗೊಂಡಿತ್ತು. ಪಟ್ಟಣದ ಶಿಗ್ಲಿ ಕ್ರಾಸ್, ಕಾಮಗಾರಿ ಅರ್ಧಕ್ಕೆ ನಿಂತ ಬಜಾರ ರಸ್ತೆ, ಜೋಳದ ಪೇಟೆ, ಗ್ರಂಥಾಲಯದ ಬಳಿ, ಸೋಮೇಶ್ವರ ದ್ವಾರದ ಹತ್ತಿರ ಅಪಾರ ಪ್ರಮಾಣದಲ್ಲಿ ನೀರು ಹರಿದುಬಂದು ರಸ್ತೆಗಳಲ್ಲಿ ಕೊಳಚೆ ನೀರು ಸಮೇತ ನೀರು ತುಂಬಿಕೊಂಡಿದ್ದು, ವಾಹನ ಸವಾರರು, ಜನರು ಪರದಾಡುವಂತಾಗಿತ್ತು.

ಸುರಿದ ಮಳೆಗೆ ಜಮೀನುಗಳೆಲ್ಲ ನೀರಿನಿಂದ ಆವೃತವಾಗಿವೆಯಲ್ಲದೇ ಬದುವುಗಳು ಒಡೆದಿವೆ. ಕೆರೆ, ಕೃಷಿಹೊಂಡ ತುಂಬಿದ್ದು, ಹಳ್ಳ, ಬಾಂದಾರ ನದಿಯಂತೆ ಭೋರ್ಗರೆದಿವೆ. ಮಳೆರಾಯನ ಆಗಮನಕ್ಕಾಗಿ ಕಾಯುತ್ತಿದ್ದ ರೈತರು ಜಮೀನುಗಳಲ್ಲಿ ಹದಗೊಳಿಸಿದ್ದ ಕೆಲವೇ ರೈತರು ಬಿತ್ತನೆ ಮಾಡಿದ್ದು, ಎರಡು ದಿನಗಳ ಹಿಂದೆ ಕೆಲವು ರೈತರು ಬಿತ್ತನೆ ಪೂರೈಸಿದ್ದರು. ಹವಾಮಾನ ಇಲಾಖೆ ಇನ್ನೂ 3-4 ದಿನಗಳ ಕಾಲ ಭಾರೀ ಮಳೆಯಾಗುವ ಸೂಚನೆ ನೀಡಿರುವುದು ರೈತರನ್ನು ಚಿಂತೆಗೀಡುಮಾಡಿದೆ. ಪಟ್ಟಣ ಸೇರಿ ತಾಲೂಕಿನ ದೊಡ್ಡೂರ, ಹುಲ್ಲೂರ, ಸೂರಣಗಿ, ಆದ್ರಳ್ಳಿ, ಯತ್ನಳ್ಳಿ, ಅಕ್ಕಿಗುಂದ, ಬಾಲೆಹೊಸೂರ, ಕುದ್ರಳ್ಳಿ, ಬಟ್ಟೂರು, ಪು.ಬಡ್ನಿ, ಸೇರಿ ಅನೇಕ ರಸ್ತೆಗಳ ಸ್ಥಿತಿ ಅಯೋಮಯವಾಗಿದ್ದು, ಅಪಾಯಕಾರಿ ಗುಂಡಿಗಳನ್ನು ಮುಚ್ಚುವಷ್ಟು ವ್ಯವಧಾನವನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಪಟ್ಟಣದ ಬಹುತೇಕ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ತುಂಬಿಕೊಂಡಿದ್ದರಿಂದ ರಸ್ತೆಯಲ್ಲಿ ಬರುವ ಸವಾರರು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ ಅನೇಕ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ವಿದ್ಯುತ್ ವ್ಯತ್ಯಯವೂ ಉಂಟಾಗಿದ್ದು, ಅಕ್ಕಿಗುಂದ, ಬಟ್ಟೂರ, ದೊಡ್ಡೂರ ಮಾರ್ಗದ ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿದಿವೆ. ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಈ ಮಳೆ ಕೊಂಚ ನೆಮ್ಮದಿ ತಂದಿದ್ದರೂ ಕೆಲವೆಡೆ ಮಾತ್ರ ಮಳೆಯ ರುದ್ರ ನರ್ತನದಿಂದ ಬೆಚ್ಚಿ ಬೀಳುವಂತಾಗಿದೆ.


Spread the love

LEAVE A REPLY

Please enter your comment!
Please enter your name here