ರಸ್ತೆಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಇದೀಗ ಈ ಇಬ್ಬರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ನಿಜವಾದ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ವಿನಯ್ ಹಾಗೂ ರಜತ್ ಪೊಲೀಸರ ವಿಚಾರಣೆ ವೇಳೆ ಪೊಲೀಸರಿಗೆ ರಬ್ಬರ್ ಮಚ್ಚನ್ನು ನೀಡಿ ದಾರಿ ತಪ್ಪಿಸಿದ್ದರು. ಇದೀಗ ಪೊಲೀಸರು ನಿಜವಾದ ಮಚ್ಚಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಮಧ್ಯೆ ರಬ್ಬರ್ ಮಚ್ಚು ನೀಡಿ ಪೊಲೀಸರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಸುದ್ದಿಗೆ ರಜತ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿರುವ ರಜತ್, ‘ನಾನು ವಿನಯ್ ರೀಲ್ಸ್ ಮಾಡಿದ್ದೆವು. ಕಲಾವಿದರಾಗಿ ರೀಲ್ಸ್ ಮಾಡಿದ್ದು ಅಷ್ಟೇ ಹೊರತು, ಯಾವುದೇ ಕೆಟ್ಟ ಉದ್ದೇಶಕ್ಕೆ ಮಾಡಿಲ್ಲ. ರೀಲ್ಸ್ ಮಾಡಲು ಬಳಸಿದ್ದ ಮಚ್ಚನ್ನು ಸೆಟ್ ಕಡೆಯಿಂದ ಕಳುಹಿಸಿಕೊಟ್ಟಿದ್ದರು. ನಾವು ಪೊಲೀಸರ ಬಳಿ ಇದ್ದ ಕಾರಣ ಅವರು ಯಾವ ಮಚ್ಚು ಕಳುಹಿಸಿ ಕೊಟ್ಟಿದ್ದಾರೆ ಎಂಬುದು ಗೊತ್ತಿರಲಿಲ್ಲ. ನಾವು ನೋಡಿರಲೂ ಇಲ್ಲ. ಪೊಲೀಸರಿಗೆ ಬೇರೆ ಮಚ್ಚು ಹೋಗಿದೆ ಅನ್ನೋದು ಗೊತ್ತಾಯಿತು. ಪೊಲೀಸರ ದಾರಿತಪ್ಪಿಸುವ ಕೆಲಸ ಮಾಡಿಲ್ಲ. ಸೆಟ್ ಪ್ರಾಪರ್ಟಿ ಮಿಸ್ ಆಗಿದೆ, ಕೊಡುತ್ತೇವೆ. ಬೇಕಂತಲೇ ಮಾಡಿಲ್ಲ’ ಎಂದು ರಜತ್ ಹೇಳಿದ್ದಾರೆ.
ರಜತ್ ಹಾಗೂ ವಿನಯ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಒಂದು ದಿನ ನ್ಯಾಯಾಂಗ ಬಂಧನಕ್ಕೆ ವಹಿಸಿ ಜಡ್ಡ್ ಆದೇಶಿಸಿದ್ದಾರೆ. ಇಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದ್ದು, ಈ ವೇಳೆ ಇನ್ನೂ ಕೆಲ ದಿನ ಪೊಲೀಸ್ ಕಸ್ಟಡಿಗೆ ಕೇಳೋ ಸಾಧ್ಯತೆ ಹೆಚ್ಚಿದೆ.