ಮಚ್ಚು ಹಿಡಿದ ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಮತ್ತೆ ಜೈಲು ಸೇರಿದ್ದಾರೆ. ಜಾಮೀನಿನ ಮೂಲಕ ಹೊರ ಬಂದ ಕೆಲವೇ ದಿನಗಳಲ್ಲಿ ಮತ್ತೆ ಪರಪ್ಪನ ಅಗ್ರಹಾರಕ್ಕೆ ಹೋಗುವಂತಾಗಿದೆ. ಇದೇ ಪ್ರಕರಣದಲ್ಲಿ ಸಿಲುಕಿರುವ ವಿನಯ್ ಗೌಡ ಅವರು ದಂಡ ಕಟ್ಟಿದ್ದಾರೆ. ಜೈಲು ವಾಸದಿಂದ ಸದ್ಯಕ್ಕೆ ಅವರು ಬಚಾವ್ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿನಯ್ ಗೌಡ ನನ್ನ ಹಾಗೂ ರಜತ್ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂದಿದ್ದಾರೆ.
‘ಯಾರೇ ಆದರೂ ಕೂಡ ಜೈಲಿಗೆ ಹೋದರೆ ನೋವು ಆಗುತ್ತದೆ. ನನ್ನ ಪ್ರಕ್ರಿಯೆ ಮುಗಿಸಿಕೊಂಡು ಹೋಗುತ್ತಿದ್ದೇನೆ. ರಜತ್ ನನ್ನ ಸ್ನೇಹಿತ, ಸಹೋದರ. ನಾನು ಅಣ್ಣನ ಥರ ಎಂದು ಅವನೇ ಹೇಳಿದ್ದಾನೆ. ಹಾಗಾಗಿ ನಾನು ನನ್ನ ತಮ್ಮನನ್ನು ಹೇಗೆ ಬಿಟ್ಟುಕೊಡಲಿ? ರೀಲ್ಸ್ ವಿಷಯವೇ ಬೇರೆ, ನಮ್ಮ ಸಂಬಂಧವೇ ಬೇರೆ. ಅವನು ಏನೇ ಆಗಿರಲಿ ಅವನು ನನ್ನ ತಮ್ಮನೇ’ ಎಂದು ವಿನಯ್ ಗೌಡ ಅವರು ಹೇಳಿದ್ದಾರೆ.
‘ಕೋಟಿ ಕೊಟ್ಟರೂ ರಜತ್ ಜೊತೆ ರೀಲ್ಸ್ ಮಾಡಲ್ಲ ಎಂಬುದಾಗಿ ನಾನು ಹೇಳಿದ್ದೇನೆ ಎಂಬುದು ತಪ್ಪು ಹೇಳಿಕೆ. ತಮಾಷೆಗೆ ಕೇಳಿದಾಗ ಹಾಗೆ ಹೇಳಿರಬಹುದು. ಅದು ಗಂಭೀರವಾದ ಮಾತಲ್ಲ. ನನಗೆ ಏನು ಅನಿಸಿದೆಯೋ ಅದನ್ನು ನಾನು ಮಾಡಿದ್ದೇನೆ. ರಜತ್ ಬಗ್ಗೆ ನನಗೆ ಬೇಜಾರು ಇಲ್ಲ. ಕೇವಲ ಕೋಪ ಇದೆ. ಅದು ಸರಿ ಹೋಗುತ್ತದೆ. ಸ್ನೇಹದಲ್ಲಿ ಇದೆಲ್ಲ ಸಹಜ’ ಎಂದು ವಿನಯ್ ಗೌಡ ಹೇಳಿದ್ದಾರೆ.