ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 50 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಎಸ್.ವಿ.ಆರ್ 50 ಸಾಧನೆ ಎಂದು ಕಾರ್ಯಕ್ರಮ ಆಚರಿಸಲಾಗಿದೆ. ಈ ಕಾರ್ಯಕ್ರಮ ಉದ್ಘಾಟನೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡಿದಿದ್ದು ಅ.23 ರಿಂದ 27 ರವರೆಗೆ 5 ದಿನಗಳ ಕಾಲ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಸಿನಿಮಾಗಳ ಪ್ರದರ್ಶನ ಸಂವಾದ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್-23 ರಂದು ಕಲಾವಿದರ ಸಂಘದಲ್ಲಿಯೇ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರವನ್ನ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದ್ದಾರೆ. ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ.
ಎಸ್.ವಿ.ಆರ್ 50 ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್, ಗಿರೀಶ್ ಕಾಸರವಳ್ಳಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ಅಶ್ವತ್ಥ್ ನಾರಾಯಣ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಶಾಸಕ ಮುನಿರತ್ನ ಭಾಗಿಯಾಗಿದ್ದರು. ಜೊತೆಗೆ ಗಿರಿಜಾ ಲೊಕೇಶ್, ಸಂಗೀತ ನಿರ್ದೇಶಕ ಹಂಸಲೇಖ, ನಾಗತಿಹಳ್ಳಿ ಚಂದ್ರಶೇಖರ್, ಶ್ರೀನಾಥ್ ಹಾಗೂ ರಾಜೇಂದ್ರ ಸಿಂಗ್ ಬಾಬು ಕುಟುಂಬಸ್ಥರು, ಆಪ್ತರು ಸೇರಿ ಇಡೀ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ಅವರ ಇಡೀ ಕುಟುಂಬ ಸಿನಿಮಾ ರಂಗಕ್ಕೆ ನೀಡಿದ ಅಪಾರ ಕೊಡುಗೆ ಬಗ್ಗೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಮಾತಾಡಿದ್ದಾರೆ. ಪ್ರತಿ ವರ್ಷವೂ ಚಿತ್ರರಂಗದಲ್ಲಿ ಸಾಧನೆ ಮಾಡಿದ ಒಬ್ಬೊಬ್ಬ ನಿರ್ದೇಶಕರನ್ನ, ತಂತ್ರಜ್ಞರನ್ನ ಗುರುತಿಸಿ ಗೌರವಿಸುವ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.
ರಾಜೇಂದ್ರ ಸಿಂಗ್ ಬಾಬು ಅವರು 1975 ರಲ್ಲಿ ಬಂದ ನಾಗಕನ್ಯೆ ಚಿತ್ರದ ಮೂಲಕವೇ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕ ಎಂಟ್ರಿಕೊಟ್ಟರು. ಬಳಿಕ ನಾಗರಹೊಳೆ, ಕಿಲಾಡಿ ಜೋಡಿ, ಅಂತ, ಸಿಂಹದ ಮರಿ ಸೈನ್ಯ, ಬಾಲಿವುಡ್ನ ಮೇರಿ ಆವಾಜ್ ಸುನೋ, ಮುತ್ತಿನ ಹಾರ, ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು ಸೇರಿದಂತೆ ಇನ್ನೂ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.


