ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ತಾಲೂಕಿನ ರಾಜೂರಿನ ಶ್ರೀ ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಚಂದ್ರಗೌಡ ಪಾಟೀಲ ಭುವನೇಶ್ವರಿ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಕನ್ನಡ ನಾಡು ಶ್ರೀಗಂಧದ ಬೀಡು. ಶಾಂತಿ, ನೆಮ್ಮದಿಯ ತವರೂರು. ಇಂತಹ ನಾಡಿನಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು ಎಂದರು. ಶಾಲೆಯ ಮುಖ್ಯೋಪಾಧ್ಯಾಯರಾದ ಕಳಕಪ್ಪ ಬೆನಕನವಾರಿ ಮಾತನಾಡಿ, ಕನ್ನಡ ಭಾಷೆಯು ನಮ್ಮ ಹೃದಯದ ಭಾಷೆಯಾಗಿದೆ. ಕನ್ನಡವೇ ನಮ್ಮ ಉಸಿರಾಗಬೇಕು, ಬೇರೆ ಭಾಷೆಯನ್ನು ಪ್ರೀತಿಸುವುದರೊಂದಿಗೆ ನಮ್ಮ ಭಾಷೆಯಲ್ಲಿ ಜೀವಿಸಬೇಕು ಎಂದರು.
ತೃಪ್ತಿ ಗೂಳಿ, ಉದಯ ರಾಠೋಡ, ಚೈತ್ರಾ ರಾಠೋಡ ಹಾಗೂ ವಿದ್ಯಾಶ್ರೀ ಬೆನಕನವಾರಿ ಕನ್ನಡ ನಾಡು-ನುಡಿಯ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ದಿವ್ಯಾಶ್ರೀ ಕಾಳಿ ಸ್ವಾಗತಿಸಿ ನಿರೂಪಿಸಿದರು. ನಿಂಗರಾಜ ಕಪ್ಪರದ ವಂದಿಸಿದರು. ಕಾರ್ಯಕ್ರಮದಲ್ಲಿ ಚಂದ್ರಗೌಡ ಪಾಟೀಲ, ಶಿಕ್ಷಕಿಯರಾದ ಜಿ.ಜಿ. ವ್ಯಾಪಾರಿ, ಎಸ್.ಕೆ. ಬೆನಕನವಾರಿ, ಸಮಸ್ತ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಇದ್ದರು.