ವಿಜಯಸಾಕ್ಷಿ ಸುದ್ದಿ, ಗದಗ : ಕನ್ನಡ ಸಾಹಿತ್ಯ ಪರಿಷತ್ತು ಗದಗ ತಾಲೂಕು ಘಟಕ, ಎಚ್.ಸಿ.ಇ.ಎಸ್. ಪ್ರೌಢಶಾಲೆ ಮತ್ತು ಸರಕಾರಿ ಪ್ರಾಥಮಿಕ ಶಾಲೆ, ಹುಯಿಲಗೋಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಹುಯಿಲಗೋಳ ನಾರಾಯಣರಾಯರ `ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುಯಿಲಗೋಳದ ಹಿರಿಯ ಶಿಕ್ಷಕರಾದ ಹುಲಪ್ಪ ಬಾರಕೇರ ಕಾರ್ಯಕ್ರಮ ಉದ್ಘಾಟಿಸಿದರು. ಎಚ್.ಸಿ.ಇ.ಎಸ್ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಮಂಜುನಾಥ ನ್ಯಾರಲಗಂಟಿ ಉಪನ್ಯಾಸ ನೀಡಿ, ಹುಯಿಲಗೋಳ ನಾರಾಯರರಾಯರು ಬರೆದ `ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ ಗೀತೆ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಯಿತು. ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸಂಗೀತ ಶಿರೋಮಣಿ ಗಂಗೂಬಾಯಿ ಹಾನಗಲ್ಲ ಅವರು ಈ ಗೀತೆಯನ್ನು ಮೊದಲ ಬಾರಿಗೆ ಹಾಡಿದರು ಎಂದರು.
ಅತಿಥಿಗಳಾದ ಹುಲ್ಲಪ್ಪ ಬಾರಕೇತ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ತಮ್ಮ ಬದುಕನ್ನು ರೂಪಿಸಿಕೊಳ್ಳುವುದರ ಮೂಲಕ ಕರುನಾಡಿಗೆ ಮತ್ತು ಭಾರತಕ್ಕೆ ಹೆಮ್ಮೆ ತರಬೇಕು. ಇಂತಹ ಪ್ರಾತಃಸ್ಮರಣೀಯರ ನೆಲದಲ್ಲಿ ಹುಟ್ಟಿದ ನಾವೂ ಕೂಡ ಅವರಂತೆ ಸಾಧನೆ ಮತ್ತು ಸಮಾಜಮುಖಿ ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದು ನುಡಿದರು.
ತಾಲೂಕ ಪರಿಷತ್ತಿನ ಅಧ್ಯಕ್ಷರಾದ ಡಾ. ರಶ್ಮಿ ಅಂಗಡಿ ಮಾತನಾಡಿ, ಈ ವರ್ಷ `ಉದಯವಾಗಲಿ ನಮ್ಮ ಚಲುವ ಕನ್ನಡನಾಡು’ ಗೀತೆಗೆ ಸರಿಯಾಗಿ 100 ವರ್ಷಗಳಾಗುತ್ತಿವೆ. ಗದುಗಿನ ಜನಮಾನಸ ಇದನ್ನು ಹೆಮ್ಮೆಯಿಂದ ಆಚರಿಸೋಣ. ಹುಯಿಲಗೋಳ ನಾರಾಯಣರಾಯರ ಸಾಹಿತ್ಯವನ್ನು ವಿಶೇಷವಾಗಿ ನಾಟಕ ಸಾಹಿತ್ಯವನ್ನು ಸಮಗ್ರವಾಗಿ ಮುದ್ರಿಸಿ ಮುಂದಿನ ಪೀಳಿಗೆಗ ಅನುವಾಗುವಂತೆ ಮಾಡುವ ಅವಶ್ಯಕತೆ ಇದೆ ಎಂದರು.
ವೇದಿಕೆಯ ಮೇಲೆ ಎಚ್.ಸಿ.ಇ.ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿ.ವಿ. ಶಿರೋಳ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಬಿ. ಅಬ್ಬಿಗೇರಿ ಉಪಸ್ಥಿತರಿದ್ದರು. ತಾಲೂಕಾ ಕ.ಸಾ.ಪ ಕಾರ್ಯದರ್ಶಿ ಪ್ರೊ. ಡಿ.ಎಸ್. ನಾಯಕ ಕಾರ್ಯಕ್ರಮ ನಿರೂಪಿಸಿದರು. ಕೋಶಾಧ್ಯಕ್ಷರಾದ ಪಾರ್ವತಿ ಬೇವಿನಮರದ ವಂದಿಸಿದರು.