ಶಿವಮೊಗ್ಗ:- ಮುಸ್ಲಿಮರ ಓಲೈಕೆಗಾಗಿ ಸರ್ಕಾರ ರಾಮನಗರ ಹೆಸರು ಬದಲಾವಣೆ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಮ ಎನ್ನುವ ಹೆಸರಿದ್ದರೆ ನಿಮಗೆ ಏನಾದರೂ ಸಮಸ್ಯೆ ಇದೆಯಾ? ಹಿಂದುತ್ವದ ಹೆಸರು ಬಂದರೆ ಸಿದ್ದರಾಮಯ್ಯ, ಡಿಕೆಶಿ ಅವರಿಗೆ ದೆವ್ವ ಬಂದಹಾಗೆ ಆಗುತ್ತದೆ. ರಾಮನಗರದ ಹೆಸರು ರಾಮನಗರ ಅಂತಾನೇ ಇರಬೇಕು ಎಂದರು.
ಇಡೀ ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ರೈತರು ಸಂಪೂರ್ಣ ಸಂಕಷ್ಟದಲ್ಲಿ ಇದ್ದಾರೆ. ಕಾಂಗ್ರೆಸ್ನವರು ಬಿಜೆಪಿ ಮೇಲೆ ಆರೋಪ ಮಾಡುವುದರಲ್ಲೇ ಬ್ಯುಸಿ ಆಗಿದ್ದಾರೆ. ರಾಜ್ಯ ಸರ್ಕಾರ ವಾಲ್ಮೀಕಿ ಹಗರಣದಲ್ಲಿ ಸಿಲುಕಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಸಿಲುಕಿದ್ದಾರೆ ಎಂದು ಹೇಳಿದರು.
14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ಆಗಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ, ಅಪೆಕ್ಸ್ ಬ್ಯಾಂಕ್ ಹಗರಣ ಹಾಗು ಬೋವಿ ನಿಗಮದ ಹಗರಣದ ಬಗ್ಗೆ ಮಾಧ್ಯಮದಲ್ಲಿ ಪ್ರತಿನಿತ್ಯ ಬರುತ್ತಿದೆ. ಈ ಬಗ್ಗೆ ಸಿದ್ದರಾಮಯ್ಯ ಸದನದಲ್ಲಿ ಉತ್ತರ ಕೊಡಲೇ ಇಲ್ಲ. ಯಾಕೆಂದರೆ ಎಲ್ಲರೂ ಹಗರಣದ ಬಗ್ಗೆ ದಾಖಲಾತಿ ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದರು. ನಿಮ್ಮ ಬಳಿ ದಾಖಲೆ ಇದ್ದರೆ ಬಿಜೆಪಿ, ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವ ಎಲ್ಲಾ ಹಗರಣವನ್ನು ಸಿಬಿಐಗೆ ವಹಿಸಿ. ಯಾರೇ ಹಗರಣ ಮಾಡಿದರೂ ಬಹಿರಂಗ ಆಗುತ್ತದೆ ಎಂದರು.