ವಯೋಸಹಜ ಕಾಯಿಲೆಯಿಂದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ನಿಧನರಾಗಿದ್ದಾರೆ. ಕೃಷ್ಣ ಅವರ ಅಗಲಿಕೆಗೆ ಹಲವರು ಕಂಬನಿ ಮಿಡಿದಿದ್ದಾರೆ. ಚಿತ್ರರಂಗದವರೊಟ್ಟಿಗೂ ಕೃಷ್ಣ ಆತ್ಮೀಯ ಬಂಧ ಹೊಂದಿದ್ದು ಕೃಷ್ಣ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ. ಹಲವು ಯುವ ರಾಜಕಾರಣಿಗಳಿಗೆ ಕೃಷ್ಣ ಮಾರ್ಗದರ್ಶಕರೂ ಆಗಿದ್ದರು. ನಟಿ ರಮ್ಯಾ ಸಹ ಕೃಷ್ಣ ಅವರ ಆಪ್ತ ವಲಯದಲ್ಲಿದ್ದರು. ನಿನ್ನೆ ಕೃಷ್ಣ ಅವರ ಅಂತಿಮ ದರ್ಶನ ಪಡೆದ ರಮ್ಯಾ ಇದೀಗ ಭಾವುಕ ಫೋಸ್ಟ್ ಹಂಚಿಕೊಂಡಿದ್ದಾರೆ.
ನಿನ್ನೆ ಕೃಷ್ಣ ನಿಧನರಾಗುತ್ತಿದ್ದಂತೆ ಅವರ ನಿವಾಸಕ್ಕೆ ಆಗಮಿಸಿದ್ದ ನಟಿ ರಮ್ಯಾ, ಕಣ್ಣೀರು ಹಾಕಿದ್ದರು. ತೀವ್ರ ದುಖಃದಲ್ಲಿದ್ದ ನಟಿ ರಮ್ಯಾ ಮಾಧ್ಯಮಗಳ ಬಳಿಯೂ ಮಾತನಾಡಲಾಗದೆ ತೆರಳಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಒಂದನ್ನು ಬರೆದುಕೊಂಡು ಕಂಬನಿ ಮಿಡಿದಿದ್ದಾರೆ.
‘ಎಲ್ಲ ರೀತಿಯಿಂದಲೂ ಒಬ್ಬ ಅದ್ಭುತ ರಾಜನೀತಿಜ್ಞ ಆಗಿದ್ದರು, ಎಂದಿಗೂ ಅವರ ‘ರಾಜಕಾರಣಿ’ ರೀತಿ ವರ್ತಿಸಿದವರಲ್ಲ. ಎಂದಿಗೂ ಸಹ ಯಾರ ಬಗ್ಗೆಯೂ ಕೀಳಾಗಿ ಅವರು ಮಾತನಾಡಿದ್ದಿಲ್ಲ, ಅವರ ಎದುರಾಳಿಗಳಿಗೂ ಅದೇ ಗೌರವವನ್ನು ಅವರು ನೀಡುತ್ತಿದ್ದರು. ದೂರದೃಷ್ಟಿಯುಳ್ಳ, ಮಾನವೀಯತೆ ಹೊಂದಿದ್ದ ಸಿಹಿ ಮಾತುಗಳ ಕೃಷ್ಣ ಅವರು ಚೆನ್ನಾಗಿ ಓದಿಕೊಂಡಿದ್ದ, ಹಾಸ್ಯಪ್ರಜ್ಞೆ ಹೊಂದಿದ್ದ ವ್ಯಕ್ತಿ. ಅವರಂಥಹಾ ಸುಂದರ ವ್ಯಕ್ತಿತ್ವ ಹೊಂದಿರುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ನೀವು ನೀಡಿರುವ ಎಲ್ಲದಕ್ಕೂ ಧನ್ಯವಾದ. ನೀವು ಈಗ ನಿಮ್ಮ ಆತ್ಮೀಯ ಗೆಳೆಯನನ್ನು ಸೇರಿಕೊಂಡಿದ್ದೀರಿ’ ಎಂದು ರಮ್ಯಾ ಬರೆದುಕೊಂಡಿದ್ದಾರೆ.
ರಮ್ಯಾ ಅವರ ಸಾಕು ತಂದೆ ಆರ್ಟಿ ನಾರಾಯಣ್ ಅವರು ಎಸ್ಎಂ ಕೃಷ್ಣ ಅವರ ಆತ್ಮೀಯ ಗೆಳೆಯರಾಗಿದ್ದರು. ಹಲವು ವರ್ಷಗಳಿಂದಲೂ ಕೃಷ್ಣ ಹಾಗೂ ನಾರಾಯಣ್ ಗೆಳೆಯರಾಗಿದ್ದರು ಹಲವು ವರ್ಷಗಳ ಕಾಲ ಇಬ್ಬರೂ ಒಟ್ಟಿಗೆ ಟೆನ್ನಿಸ್ ಆಡುತ್ತಿದ್ದರು. ಇದೇ ಕಾರಣಕ್ಕೆ ರಮ್ಯಾ, ಅವರು ‘ನೀವೀಗ ನಿಮ್ಮ ಆತ್ಮೀಯ ಗೆಳೆಯನೊಟ್ಟಿಗೆ ಇರಲಿದ್ದೀರಿ’ ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.